ಸೋಮವಾರ, ನವೆಂಬರ್ 15, 2010

ಎರಡು ಜಾಮೂನು

ನಾನು ಶಿವಮೊಗ್ಗೆಯಲ್ಲಿದ್ದ ದಿನಗಳವು.  ಶಿವಮೊಗ್ಗ ಬಹಳ ಸುಂದರವಾದ ಊರು ಮತ್ತು ಅಲ್ಲಿನ ಜನರೂ ಅಷ್ಟೇ ಬಹಳ ಸೂಕ್ಷ್ಮ ಸ್ವಭಾವದವರು.  ಅಲ್ಲಿದ್ದಷ್ಟೂ ದಿನಗಳೂ ನಾನು ನನ್ನ ಗೆಳತಿಯರೊಂದಿಗೆ ದಿನವೂ ಸಂಜೆ ಕೃಷ್ಣ ಕೆಫೆ ಗೆ ಕಾಫಿ ಕುಡಿಯಲು ಹೋಗುವುದು ವಾಡಿಕೆಯಾಗಿತ್ತು.  ಹೀಗೆ ಒಂದು ಬಾರಿ ಕಾಫಿ ಹೀರುತ್ತಿದ್ದಾಗ ಪಕ್ಕದ ಬೇಕರಿಯಿಂದ ಜೋರು ಜೋರಾಗಿ ಹೊಡೆದಾಡುತ್ತಿರುವ ಶಬ್ದ ಕೇಳಿ ಬಂತು. ಎಲ್ಲರೂ  ಆ ಕಡೆಗೆ ದೌಡಾಯಿಸಿದೆವು. ಬೇಕರಿ ಮಾಲೀಕ ಸುಮಾರು  7-8 ವರ್ಷದ ಬಾಲಕನನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದ. ಸುತ್ತ ಮುತ್ತಲಿದ್ದವರೆಲ್ಲ ಆ ಬಾಲಕನನ್ನು ಕನಿಕರದಿಂದ ನೋಡುತ್ತಿದ್ದರೆ ವಿನ: ಯಾರೂ ಏನೊಂದೂ ಮಾತಾಡಲಿಲ್ಲ. ನಾನೂ ಕೂಡ ಆ ಜನರಲ್ಲಿ ಒಬ್ಬಳಾಗಿದ್ದೆ. ಕಡೆಗೆ ಹಿರಿಯರೊಬ್ಬರು ಆ ಮಗುವನ್ನು  ಬಿಡಿಸಿಕೊಂಡು ವಿಷಯ ಏನೆಂದು ಕೇಳಿದರು. ಬೇಕರಿ ಮಾಲೀಕನ ಕೋಪ ಇನ್ನೂ  ತಣ್ಣಗಾದ೦ತಿರಲಿಲ್ಲ ಗುರ್.. ಗುರ್... ಎನ್ನುತ್ತಲೇ "ನೋಡೀ ಸ್ವಾಮಿ, ಈ ಹುಡ್ಗ ಜಾಮೂನ್ ಕೇಳ್ದ..  ಆದ್ರೆ ಕಾಸ್ ಮಾತ್ರ ತಂದಿಲ್ಲ.  ಕೊಡಲ್ಲ ಅಂದಿದ್ದಕ್ಕೆ ಜಾಮೂನ್  ಡಬ್ಬೀಗೆ ಕೈ ಹಾಕಿ ಬಿಟ್ಟ. ಕತ್ತೆ ಭಡವ..."  ಹಿರಿಯರು ಹೋಗ್ಲಿ ಬಿಡಪ್ಪ ಮಗು ಚಿಕ್ಕದು ತಿಳುವಳಿಕೆ ಇಲ್ಲ. ಹೊಡೆದರೆ ಏನ್ ಪ್ರಯೋಜನ?"  ಅಂತ ಸಮಾಧಾನ ಮಾಡಿದ್ರು. ಸೇರಿದ್ದ ಜನರೆಲ್ಲಾ ಚದುರಿದರೂ ನನಗೇಕೋ ಅಲ್ಲಿಂದ ಹೋಗಲು ಕಾಲುಗಳೇ ಬರುತ್ತಿಲ್ಲ.  ಕಂಬದ ಹಾಗೆ ನಿಂತುಬಿಟ್ಟಿದ್ದೆ. ಹೊಡೆತದ ನೋವು ತಾಳಲಾರದೆ ಅಲ್ಲೇ ಬಿದ್ದಿದ್ದ ಹುಡುಗ ಎರಡೇ ಜಾಮೂನು... ಎರಡೇ ಎರಡು ಜಾಮೂನು... ಅಂತ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದ. ಇದನ್ನು ನೋಡಿದ ಎಂಥವರಿಗೂ ಸಂಕಟವಾಗುತ್ತಿತ್ತು. ನನ್ನ ಗೆಳತಿಯರೆಲ್ಲ ಅದಾಗಲೇ ಹೊರತು ಹೋಗಿದ್ದರು. ವಾಚ್ ನೋಡಿಕೊಂಡೆ ಆಗಲೇ  7.45 ಸಂಜೆ  8 ಗಂಟೆಯ ಒಳಗೆ ಹಾಸ್ಟೆಲ್ ಗೆ  ಹೋಗದಿದ್ದರೆ ಆಮೇಲೆ ಪ್ರವೇಶವಿಲ್ಲ. ತತ್ ಕ್ಷಣ  ವೇಗವಾಗಿ ಹಾಸ್ಟೆಲ್ ಕಡೆಗೆ ಓಡಿದೆ.

ರಾತ್ರಿ ಎಲ್ಲ ನಿದ್ದೆ ಇಲ್ಲ. ಆ ಹುಡುಗನ ಮುಖವೇ ಕಣ್ಮುಂದೆ ಬಂದ ಹಾಗಾಗುತ್ತಿತ್ತು. ಪಾಪ ಮಗು ಜಾಮೂನು ತಿನ್ನಲು ಆಸೆ ಪಟ್ಟಿತ್ತು. ಅಷ್ಟೊಂದು ಜನರಿದ್ದರಲ್ಲ ಅವರಲ್ಲಿ ಒಬ್ಬರಿಗೂ ಎರಡು ಜಾಮೂನು ಕೊಡಿಸುವ ಯೋಗ್ಯತೆ ಇರಲಿಲ್ಲವೇ? ಬೇರೆಯವರ ಮಾತು ಬಿಡಿ ನಾನು?? ನಾನು ಕೂಡ ಸುಮ್ಮನೆ ಇದ್ದೆನಲ್ಲ. ನಾನಾದರೂ ಕೊಡಿಸಬಹುದಿತ್ತು. ಬರೀ ಎರಡು ಜಾಮೂನಿಗಾಗಿ ಅಷ್ಟೊಂದು ಒದೆಗಳನ್ನು ತಿಂದನಲ್ಲ ಪಾ.. ಪ.  ಇನ್ನೂ ಬೇಕರಿಯ ಯಜಮಾನ? ಛೇ ಅವನಿಗಂತೂ ಸ್ವಲ್ಪವೂ ಮಾನವೀಯತೆ ಇಲ್ಲ. ಅವನಿಗೂ ಮಕ್ಕಳಿದ್ದಾರೆ. ಮಕ್ಕಳ ಮನಸ್ಸು ತಿಳಿಯದ ಕ್ರೂರಿಯೇ? ಮನಸ್ಸಿಗೆ ಸಮಾಧಾನ ಆಗುವಷ್ಟು ಅವನಿಗೆ ಬೈದೆ.

ಮರುದಿನ ಗೆಳತಿಯರ ಬಳಿ ಈ ವಿಷಯವನ್ನೆಲ್ಲ ಚರ್ಚಿಸಿದೆ ಒಬ್ಬೊಬ್ಬರದೂ ಒಂದೊಂದು ಅನಿಸಿಕೆ. ಇಂಥದೆಲ್ಲ ನಡೀತಾ ಇರುತ್ತೆ ಇದಕ್ಕೆಲ್ಲ ತಲೆಕೆಡಿಸ್ಕೊಂಡರೆ ಆಗುತ್ತಾ ಅಂತ ಒಬ್ಬಳಂದ್ರೆ ನೀನು ಇವರನ್ನೆಲ್ಲ ಉದ್ಧಾರ ಮಾಡಕ್ಕಾಗುತ್ತಾ ಅನ್ನೋ ವ್ಯಂಗ್ಯ ಇನ್ನೊಬ್ಬಳದು. ಅವರಾರಿಗೂ ಈ ವಿಷಯಗಳ ಬಗ್ಗೆ ಆಸಕ್ತಿ ಇಲ್ಲವೆಂಬುದು ಗೊತ್ತಾಗಿತ್ತು.  ಆದರೆ ನನ್ನ ಜಾಗೃತ ಮನಸ್ಸು ಮಾತ್ರ 'ನೀನು ಬದಲಾಗಬೇಕಿದೆ' ಎಂದು ಪದೇ ಪದೇ ಹೇಳುತ್ತಿತ್ತು. ಹೌದು.. ನಾನು ಬದಲಾಗಬೇಕಿದೆ. ಆ ಹುಡುಗನನ್ನು ನಾನೇ ಕಾಪಾಡಬಹುಡಿತ್ತು. ಹಿರಿಯರೊಬ್ಬರು ಬಂದು ಅವನನ್ನು ಬಿಡಿಸುವವರೆಗೂ ಕಾಯಬೇಕಿರಲಿಲ್ಲ. ಇಂತಹ ಎಷ್ಟೊಂದು ಸಂದರ್ಭಗಳಲ್ಲಿ ನಾನು ಮೂಕಳಾಗಿ ನಿಂತು ನೋಡಿಲ್ಲ? ನನಗಿದು ಖಂಡಿತಾ ಮೊದಲನೆಯ ಬಾರಿಯೇನಲ್ಲ. ಪ್ರತಿಯೊಂದು ಬಾರಿ ಅನ್ಯಾಯವಾಗುತ್ತಿದ್ದಾಗಲೂ ಪ್ರತಿಭಟಿಸದೇ ಕಣ್ಣಿಗೆ ಬಟ್ಟೆ ಕಟ್ಟಿ  ಕೊಂಡ೦ತಿದ್ದೇನೆ. ಬೇರೆಯವರ ವಿಷಯ ಬಿಡಿ.. ಸ್ವತ: ನನಗೆ ಅನ್ಯಾಯವಾದಾಗಲೂ ಏನೂ  ಆಗಿಲ್ಲವೆಂಬಂತೆ ಸಹಿಸಿಕೊಂಡಿದ್ದೇನೆ. ಚಿಕ್ಕ ಉದಾಹರಣೆಯೆಂದರೆ ಬಸ್ ಕಂಡಕ್ಟರ್ ಸರಿಯಾದ ಚಿಲ್ಲರೆ ಕೊಡದೆ ಉಳಿದ ಹಣವನ್ನು ತನ್ನ ಜೇಬಿಗೆ ಇಳಿಸಿದಾಗಲೂ ಎನೂ ಹೇಳದೆ  'ಚಿಲ್ಲರೆ ಕಾಸು ತಾನೇ ತಿಂದು ಸಾಯ್ಲಿ' ಎಂದು ಮನಸ್ಸಿನಲ್ಲೇ ಅವನನ್ನು ಶಪಿಸಿದ್ದೇನಾಗಲಿ ಧ್ವನಿ ತೆಗೆದು ಜಗಳ ಮಾಡಿಲ್ಲ. ಇಂತಹ ಅಮಾನುಷ  ಕೃತ್ಯ ಗಳನ್ನೆಲ್ಲ ಸಹಿಸಿಕೊಳ್ಳಬಾರದು ಮತ್ತು ಬೇರೆಯವರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ತಡೆಯಬೇಕು ಎಂದೆಲ್ಲ ಮನಸ್ಸಿನಲ್ಲೇ ಶಪಥ ಮಾಡಿಕೊಂಡೆ. 

ಸುಮಾರು ದಿನಗಳ ನಂತರ ಗಾಂಧಿಬಜಾರಿನಲ್ಲಿ ನಡೆದು ಬರುತ್ತಿದ್ದಾಗ ಮತ್ತದೇ ಹುಡುಗ ಕಣ್ಣಿಗೆ ಬಿದ್ದ. ಯಾರದೋ ಪರ್ಸ್ ಹೊಡೆದು ಓಡಿ ಬರುತ್ತಿದ್ದ ಅವನನ್ನು ತಡೆದೆ. ಕೈ ಬಿಡಿಸಿಕೊಂಡು ಓಡಿ ಹೋಗುತ್ತಿದ್ದವನಿಗೆ " ನೋಡು ನಿಂಗೆ ಐವತ್ತು ರೂಪಾಯಿ ಕೊಡ್ತೀನಿ ಓಡಿ ಹೋಗಬೇಡ" ಅಂದೆ.  ಕಣ್ಣರಳಿಸಿ " ಏನು? ಐವತ್ತು ರೂಪಾಯ?" ಅಂದ. "ಹ್ಞೂ... ಐವತ್ತು ರೂಪಾಯಿ!!... ಬೇಕರಿನಲ್ಲಿ ಜಾಮೂನು ಕದಿಯಕ್ಕೆ ಹೋಗಿ ಹೊಡೆಸಿಕೊಳ್ತಿದ್ದೆಯಲ್ಲ ಅವತ್ತು ನಾನು ನಿನ್ನ ನೋಡಿದ್ದೀನಿ. ಆದ್ರೆ ನೀನು ನಂಗೆ ನಿಜ ಹೇಳ್ಬೇಕು..  ನೀನು ಯಾರು? ಅಪ್ಪ ಅಮ್ಮ ಎಲ್ಲಿದ್ದಾರೆ? ಯಾಕೆ ಕಳ್ತನ ಮಾಡ್ತಿದಿಯಾ? ಅಂತ".  ಅದಕ್ಕೆ ಅವನು ಅಳುತ್ತ  "ಅಪ್ಪ ಅಮ್ಮ ಇಬ್ರೂ ಕೂಲಿ ಮಾಡ್ತಾರೆ.. ಅಪ್ಪ  ಬರೀ ಕುಡಿಯೋದು ಹೊಡೆಯೋದು ಅಷ್ಟೇ.  ತಿನ್ನಕ್ಕೆ ಎನೋ ಇಲ್ಲಾ ಅಂದ್ರೆ ಅಮ್ಮನೇ ದುಡ್ಡು ಕದ್ದು ಕೊಂಡು ಬಾ ಅಂತ ಕಳುಸ್ತಾಳೆ" ಅಂದ.  ಶಾಲೆಗೆ ಹೋಗಲ್ವಾ ನೀನು ಅಂತ ಕೇಳಿದೆ. ಅಯ್ಯೋ ತಿನ್ನಕ್ಕೆ ಗತಿಯಿಲ್ಲ ಅಂದ್ರೆ ಇಸ್ಕೂಲಿಗೆ ಎಲ್ಲಿಂದ ಬರುತ್ತೆ ಕಾಸು? ಅಂದ. ಛೇ.. ಹೌದಲ್ಲವಾ ಅಂತ ಹಾಗೆ ಬಡತನ ಮತ್ತೆ ಅದರ ಪರಿಣಾಮಗಳ ಬಗ್ಗೆ ಯೋಚಿಸುತ್ತಿದ್ದೆ. ಅಕ್ಕ ಐವತ್ತು ರೂಪಾಯಿ ಕೊಡ್ತೀನಿ ಅಂದ್ಯಲ್ಲ ಕೊಡು ಅಂದ. ಏನೂ ಕೇಳಿಸದ ಹಾಗೆ ನಿಂತಿದ್ದ ನನ್ನ ನೋಡಿ 'ಅಯ್ಯ.. ಐವತ್ತ್ ರೂಪಾಯ್ ಕೊಡ್ತೀನಿ ಅಂತ ಸುಳ್ಳು ಹೇಳಿದ್ಯಲ್ಲಕ್ಕಾ...' ಅಂತ ಅಂದವನೇ ನೋಡು ನೋಡುತ್ತಿದ್ದಂತೆಯೇ ಕಣ್ಣಿಗೆ ಕಾಣದಂತೆ ಮರೆಯಾದ.  ಅವನ ಬಗ್ಗೆ ಸಾವಿರಾರು ಯೋಚನೆಗಳು ಹರಿದಾಡ ತೊಡಗಿದವು. ಹ.. ಸಿ... ವು.... ಈ ಮೂರಕ್ಷರದ ಅಟ್ಟಹಾಸ ಎಂಥದಲ್ಲವೇ?  ಪಾಪ ಹಸಿವಿಗಾಗಿ ಕಳ್ಳತನದ ಮಾರ್ಗ ಹಿಡಿದಿದ್ದನಾಗಲಿ ಸ್ವಭಾವತಃ ಕಳ್ಳನಲ್ಲ. ಅವನಲ್ಲೂ ಒಳ್ಳೆಯ ಮನುಷ್ಯನಾಗುವ ಲಕ್ಷಣಗಳಿವೆ. ಆದರೆ ಪರಿಸ್ಥಿತಿ?? ಇಂತಹ ಲಕ್ಷಾಂತರ ಮಕ್ಕಳ ಭವಿಷ್ಯ ಮೊಗ್ಗಿನಲ್ಲೇ ಕಮರಿ ಹೋಗುತ್ತಿದೆಯಲ್ಲ.  ಇದಕ್ಕೆಲ್ಲ ಉಪಾಯವೇ ಇಲ್ಲವೇ?? ಈ ಮಕ್ಕಳ ಸುಧಾರಣೆ ಯಾವ ಕಾಲಕ್ಕೋ? ಹೀಗೆ ಮನಸ್ಸು ಗೊಂದಲದ ಗೂಡಾಗಿತ್ತು.  ದೈನಂದಿನ ಕೆಲಸಗಳಲ್ಲಿ ಇವುಗಳನ್ನೆಲ್ಲ ಯೋಚಿಸಲು ಸಮಯವಾದರೂ ಎಲ್ಲಿ?? ದಿನಗಳೆದಂತೆ ನಾನೂ ಈ ಸಂಗತಿಯನ್ನು ಮರೆತೆ.

ಸುಮಾರು ತಿಂಗಳುಗಳೇ ಕಳೆದಿರಬಹುದು. ಮತ್ತೆ ಆ ಹುಡುಗ.. ಅದೇ ಆ ಜಾಮೂನು ಹುಡುಗ ಕಣ್ಣಿಗೆ ಬಿದ್ದ. ತಕ್ಷಣ ಸರಸರನೇ ಅವನೆಡೆಗೆ ಹೆಜ್ಜೆ ಹಾಕಿದೆ. ತಳ್ಳು ಗಾಡಿಯ ಮೇಲೆ ಹೆಚ್ಚಿಟ್ಟಿದ್ದ ಕಲ್ಲಂಗಡಿ ಹಣ್ಣಿನ ತುಂಡುಗಳನ್ನೇ ನೋಡುತ್ತಾ ನಿಂತಿದ್ದ.  ಪಾಪ ಹುಡುಗ ಹಸಿದಿರಬೇಕೆಂದು ಅವನ ಹತ್ತಿರ ಹೋದೆ.  "ಎನೋ ಪುಟ್ಟಾ.. ಹಸಿವಾಗ್ತಿದೆಯಾ?" ಅಂತ ಕೇಳಿದೆ. "ಹೌದಕ್ಕ.. ತುಂಬಾ ಹಸಿವು"  ಅಂದ. ಅವನನ್ನು ಕರೆದುಕೊಂಡು ಕೃಷ್ಣ ಕೆಫೆಗೆ ಬಂದೆ. ಒಂದು ಮಸಾಲೆ ದೋಸೆ ಬೇಕೆಂದ. ಸರಿ ಅದನ್ನು ಆರ್ಡರ್ ಮಾಡಿದೆ. ನಾನು ಕೂಡ ಒಂದು ಕಾಫಿ ತಗೊಂಡು ಅವನ ಬಗ್ಗೆ ವಿಚಾರಿಸುತ್ತಾ ಹೋದೆ. ಅಷ್ಟರಲ್ಲಿ ಮಸಾಲೆ ದೋಸೆ ಬಂತು. ಟೇಬಲ್ ಮೇಲೆ ಇಡುತ್ತಿದ್ದಂತೆ ಒಂದೇ ಏಟಿಗೆ ತಿಂದು ಬಿಡುವವನಂತೆ ಪ್ಲೇಟನ್ನು ತನ್ನತ್ತ ಎಳೆದುಕೊಂಡು ತಿನ್ನತೊಡಗಿದ. ನಿಜ ಹಸಿವು ಎನ್ನುವುದು ಬಡವರ ಶತ್ರು. ಹಸಿವು ಎಂಬ ರಾಕ್ಷಸ ಈ ಹುಡುಗನ ಬದುಕನ್ನೇ ನರಕ ಮಾಡಿದ್ದಾನೆ ಎಂದು ಯೋಚಿಸುತ್ತಿದ್ದೆ. ಏನೋ ಮನಸ್ಸಿನಲ್ಲಿ ಸುಳಿಯಿತು.  ಹೇ.. ಈ ಹುಡುಗನಿಗೆ ಜಾಮೂನೆಂದರೆ ಇಷ್ಟ ಅಲ್ಲವೇ? ಕೃಷ್ಣ ಕೆಫೆಯಲ್ಲಿ ಜಾಮೂನು ಇಲ್ಲವೆಂದು ಗೊತ್ತಾದ ಮೇಲೆ ಸರಿ ಪಕ್ಕದಲ್ಲೇ ಇದ್ದ ಬೇಕರಿಯಿಂದ ತರೋಣವೆಂದು ಎದ್ದೆ. "ಪುಟ್ಟಾ.. ನೀನು ತಿಂತಾ ಇರು. ನಿನಗೋಸ್ಕರ ಜಾಮೂನು ತರ್ತೀನಿ" ಅಂತ ಹೇಳಿ ಹೊರಟೆ. ಮನಸಿನಲ್ಲಿ ಏನೋ ಸಂತೋಷ..  ಹುಡುಗನ ಆ ಕ್ಷಣದ ಹಸಿವನ್ನು ಶಮನ ಮಾಡಿದ ತೃಪ್ತಿ.. ಬೇಕರಿಯಲ್ಲಿ ಎರಡು ಜಾಮೂನು ಮತ್ತು ೧೦೦ ಗ್ರಾಂ ಖಾರಾ ಬೂಂದಿ ಕಟ್ಟಿಸಿಕೊಂಡೆ.  ದುಡ್ಡು ಕೊಡಲೆಂದು ಹೆಗಲಿಗೆ ನೇತು ಹಾಕಿಕೊಂಡಿದ್ದ ಹ್ಯಾಂಡ್ ಬ್ಯಾಗ್...  ಒಹ್ ಹ್ಯಾಂಡ್ ಬ್ಯಾಗನ್ನು ಕೆಫೆಯಲ್ಲೇ ಮರೆತು ಬಂದಿದ್ದೆ.  ಬೇಕರಿಯವರಿಗೆ ಒಂದು ನಿಮಿಷಾ ಸಾರ್.. ಈಗ ಬರ್ತೀನಿ  ಅಂತ ಕೆಫೆಗೆ  ಬಂದೆ.  ಆ ಹುಡುಗ ಅಲ್ಲೆಲ್ಲೂ ಕಾಣಲಿಲ್ಲ. ಬಹುಶ: ಕೈ ತೊಳೆಯಲು ಹೋಗಿರಬಹುದೆಂದುಕೊಂಡೆ. ಏನೋ ಅನುಮಾನ ಬಂದಂತಾಗಿ ತಕ್ಷಣ ನನ್ನ ಹ್ಯಾಂಡ್ ಬ್ಯಾಗ್ ಗಾಗಿ ಹುಡುಕಾಡಿದೆ. ಎಲ್ಲೂ ಕಾಣಲಿಲ್ಲ..  ಒಂದು ಕ್ಷಣ ಎದೆ ಧಸಕ್ಕೆಂದಿತು... ಆ ಹುಡುಗನ ಬಗ್ಗೆ ಇದ್ದ ಅನುಕಂಪ ಕಾಳಜಿ ಎಲ್ಲವೂ ಒಂದೇ ಕ್ಷಣದಲ್ಲಿ ಕರಗಿ ಹೋದವು. ವಾಸ್ತವತೆಯ ಮುಳ್ಳು ಚುಚ್ಚಿ ಎಚ್ಚರವಾಯಿತು.  ತಟ್ಟೆಯಲ್ಲಿದ್ದ ಅರ್ಧಂಬರ್ಧ ಮಸಾಲೆ ದೋಸೆ ನನ್ನನ್ನು ಅಣಕಿಸುತ್ತಿತ್ತು. 

ಮಂಗಳವಾರ, ಜೂನ್ 22, 2010

ಆರಂಭ ಶೂರರು

ಇಂದು ಬೆಳಿಗ್ಗೆಯಿಂದ ಏನೋ ಒಂದು ಬಗೆಯ ಉತ್ಸಾಹ. ಎಲ್ಲ ಕೆಲಸಗಳನ್ನು ಸರಸರನೇ ಮುಗಿಸಿ ಹೊಸ ಚೈತನ್ಯದೊಂದಿಗೆ ಒಂದು ಹೊಸ ಕೆಲಸವನ್ನು ಕೈಗೆತ್ತಿಕೊಂಡಿದ್ದೆ. ನನ್ನ ಮನಸ್ಸೆಂಬ ಮನಸಾನಂದ ಸ್ವಾಮಿ ಯವರಿಂದ ಹೊಸ ದೀಕ್ಷೆ ಪಡೆದಿದ್ದೆ. ಏನೆಂದರೆ ಇನ್ನೆರಡು ವಾರಗಳ ಒಳಗೆ ಡ್ರೈವಿಂಗ್ ಟೆಸ್ಟ್ ಬರೆದು ಪಾಸಾಗುವುದು, ಪಾಸಾದರೆ ದೀಕ್ಷೆ ಪೂರ್ಣಗೊಂಡಂತೆ. ಈ ಗಡಿ ದಾಟುವುದರ ಒಳಗಾಗಿ ಗುರಿಯನ್ನು ತಲುಪಬೇಕೆಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿದ್ದೆ. ಅದಕ್ಕಾಗಿ ಒಂದು ದಿನವನ್ನೂ ವ್ಯರ್ಥ ಮಾಡಬಾರದೆಂದು ೯೦ ಪುಟಗಳ ಚಾಲಕರ ಕೈಪಿಡಿಯನ್ನು ಹಿಡಿದು ಓದುತ್ತಾ ಕುಳಿತೆ. ಸುಮಾರು ಒಂದೆರೆಡು ಪುಟ ಓದಿರಬಹುದು ಮೇಲ್ ಚೆಕ್ ಮಾಡೋಣವೆಂದು  ಲ್ಯಾಪ್ಟಾಪ್ ತೆಗೆದೆ. ಅಂತಹ ಖಾಸ್ ಮೇಲ್ ಯಾವುದೂ ಬಂದಿರಲಿಲ್ಲ. ಸರಿ ಅಂತರ್ಜಾಲದಲ್ಲಿ ಅದೂ ಇದೂ ಹುಡುಕಾಡತೊಡಗಿದೆ. ಸ್ವಲ್ಪ ಸಮಯದ ನಂತರ ನಾನು ಓದುತ್ತಿದ್ದುದು ನೆನಪಾಗಿ ಚಾಲಕರ ಕೈಪಿಡಿಗಾಗಿ ತಡಕಾಡಿದೆ. ಕ್ಯಾಲಿಫೋರ್ನಿಯಾದ ಚಾಲನೆಯ ನಿಯಮಗಳಿಗೂ ಭಾರತದ ನಿಯಮಗಳಿಗೂ ಬಹಳ ವ್ಯತ್ಯಾಸವಿದೆ. ಆದ್ದರಿಂದ ತುಂಬಾ ಗಮನ ಕೊಟ್ಟು ಓದಬೇಕಾಗಿತ್ತು. ಅದೂ ಅಲ್ಲದೆ ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಮಹಾನುಭಾವರೆಲ್ಲ ಹೆದರಿದವರ ಮೇಲೆ ಹಾವನ್ನು ಬಿಡುವ ಥರ ಟೆಸ್ಟ್ ತುಂಬಾ ಕಷ್ಟಕರವಾಗಿರುತ್ತದೆಂದು ಹೇಳಿದ್ದರು. ಈ ಎಲ್ಲ ಕಾರಣಗಳಿಗೆ ಅಚ್ಚುಕಟ್ಟಾಗಿ ಪೂರ್ವಸಿದ್ಧತೆಯನ್ನು ಮಾಡಬೇಕೆಂದಿದ್ದೆ. ಆದರೆ ಅದಮ್ಯ ಉತ್ಸಾಹದಿಂದ ಶುರು ಮಾಡಿದ ಕೆಲಸ ಸ್ವಲ್ಪ ಹೊತ್ತಿಗೆ ಕುಂಟುತ್ತಾ ಸಾಗಿತು. ಈ ದಿನ ಐದು ಪುಟಗಳಿಗಿಂತ ಜಾಸ್ತಿ ಓದಲು ಸಾಧ್ಯವಾಗಲೇ ಇಲ್ಲ ಎಂದುಕೊಳ್ಳುತ್ತಿರುವಾಗ ನನ್ನ ಇನ್ನೊಂದು ಮನಸ್ಸು 'ಇನ್ನೂ ಎರಡು ವಾರ ಇದೆಯಲ್ಲ ಓದಿದರಾಯ್ತು ಎಂದು ನನಗೇ ಸಮಾಧಾನ ಮಾಡಿತು. ಹೌದಲ್ಲವೇ ಎಂತಹ ದ್ವಂದ್ವ!!!


ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾಗಲೆಲ್ಲ  ಅಮ್ಮ ಆರಂಭಶೂರರು ಎಂದು ಹಾಸ್ಯಮಾಡುತ್ತಿದ್ದಳು. ಕೆಲಸದ ಆರಂಭದಲ್ಲಿ ಅಗತ್ಯಕ್ಕಿಂತ ಹೆಚ್ಚೇ ಎನಿಸುವಷ್ಟು ಉತ್ಸಾಹ ತೋರಿಸಿ ಸ್ವಲ್ಪ ದಿನಗಳಲ್ಲೇ ಹೇಳ ಹೆಸರಿಲ್ಲದಂತೆ ಕೆಲಸಕ್ಕೆ ಗುಡ್ ಬೈ ಹೇಳುವವರೇ ಆರಂಭ ಶೂರರು.  ಆರಂಭ ಶೂರರಿಗೆ ಯಶಸ್ಸು ಗಗನ ಕುಸುಮ. ನಾನು ಕೂಡ ಆರಂಭ ಶೂರರ ಪಟ್ಟಿಗೆ ಸೇರುತ್ತೇನೆಯೇ? ಮನಸು ಜಾಗೃತವಾಯಿತು. ನನ್ನ ನಡವಳಿಕೆಗೆ ಏನು ಕಾರಣ? ನನ್ನ ಪಾಡಿಗೆ ನಾನೇ ಯೋಚಿಸಲು ಪ್ರಾರಂಭಿಸಿದೆ. ನಾನು ಯಾವ ಕೆಲಸವನ್ನೇ ಶುರು ಮಾಡಿದರೂ ಬಹಳ ಉತ್ಸಾಹದಿಂದ ಶುರುಮಾಡುತ್ತಿದ್ದೆ. ಆದರೆ ಒಂದೆರೆಡು ದಿನ ಅಷ್ಟೇ ಆಮೇಲೆ ಮೊದಲಿದ್ದ ಉತ್ಸಾಹ ಎಲ್ಲಿ ಹಾರಿ ಹೋಗುತ್ತಿತ್ತೋ ಗೊತ್ತಿಲ್ಲ. ಆ ಕೆಲಸದ ಮೇಲೆ ಆಸಕ್ತಿಯೇ ಇರುತ್ತಿರಲಿಲ್ಲ. ಅಷ್ಟೇ ಅಲ್ಲ ಈ ಕೆಲಸಕ್ಕಾಗಿ ನಾನು ಇಷ್ಟೊಂದು ಸಮಯ ವ್ಯರ್ಥ ಮಾಡಿದೆನೇ ಎಂದೆನಿಸುತ್ತದೆ. ಇಲ್ಲವೇ ಇದೇ ಕೆಲಸವನ್ನು ಹೇಗಾದರೂ ಮಾಡಿ ಪೂರ್ಣಮಾಡಿದ್ದರೆ ಯಶಸ್ವಿಯಾಗುತ್ತಿದ್ದೇನೋ ಏನೋ ಛೇ ಮಾಡಲಿಲ್ಲವಲ್ಲ ಎಂದು ಪರಿತಪಿಸಿದ್ದೂ ಉಂಟು.

ನಾನು ಕೆಲಸಕ್ಕೆ ಸೇರಿದ ಮೊದಲ ದಿನ ಬಹಳ ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ಅಂದುಕೊಂಡಿದ್ದೆ. ಹಾಗೆ ನಡೆದುಕೊಳ್ಳುತ್ತಿದ್ದೆ ಕೂಡ. ಆದರೆ ಒಂದೆರೆಡು ತಿಂಗಳಾದಮೇಲೆ ಮ್ಯಾನೇಜರ್ ಗಳು ಕೊಡುತ್ತಿದ್ದ ಟಾರ್ಗೆಟ್ ಗಳು ಕೇಳಲೇ ತಲೆ ಸಿಡಿಯುತ್ತಿತ್ತು. ಇನ್ ಸೆ0ಟಿವ್ ಮತ್ತು ಬೋನಸ್ ಗಳು ಸಿಗಲಾರದ ಹುಳಿ ದ್ರಾಕ್ಷಿಯಂತಾದವು.  ಇಂಥ ಕ್ಲಿಷ್ಟಕರ ಪರಿಸ್ಥಿತಿಯನ್ನು ತಂದೊಡ್ಡಿದ ಮೇಲಧಿಕಾರಿಗಳನ್ನು ಬೈದುಕೊಳ್ಳುತ್ತಾ ಕೆಲಸ ಮಾಡತೊಡಗಿದೆ. ಏನೇ ಆದರೂ ಸಂತೋಷದಿಂದ ಕೆಲಸ ಮಾಡ ಬೇಕೆಂದುಕೊಂಡಿದ್ದ ಪ್ರತಿಜ್ಞೆಯನ್ನು ಅದ್ಯಾವಾಗಲೋ ಮುರಿದುಬಿಟ್ಟಿದ್ದೆ.

ಮನಸು ಹಿಂದಕ್ಕೆ ಕರೆದುಕೊಂಡು ಹೋಯಿತು. ಕಾಲೇಜಿನ ಮೊದಲದಿನದಿಂದಲೇ ಚೆನ್ನಾಗಿ ಓದಬೇಕೆಂಬ ಹಂಬಲ. ಪಾಠ ಪ್ರವಚನಗಳು ಶುರುವಾಗುತ್ತಿದ್ದ ಹಾಗೆ ಸ್ವಂತ ಟಿಪ್ಪಣಿಗಳನ್ನು ಮಾಡಿಕೊಳ್ಳುವುದು, ಗ್ರಂಥಾಲಯದಿಂದ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತಂದು ಓದುವುದು ಹೀಗೆ ನಡೆದಿತ್ತು. ಇದೆಲ್ಲ ಶುರುವಾಗಿ ಒಂದು ತಿಂಗಳಾದರೂ ಆಗಿರಲಿಲ್ಲ ಕಾಲೇಜಿನ ವೆಲಕಾಮ್ ಪಾರ್ಟಿ ಫ್ರೆಷೆರ್ಸ್ ಪಾರ್ಟಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತೀ ಉತ್ಸಾಹ ತೋರಿಸುತ್ತಾ ಓದುವುದನ್ನು ಬದಿಗಿರಿಸಿಬಿಡುತ್ತಿದ್ದೆ. ಅಯ್ಯೋ ಪರೀಕ್ಷೆಗೆ ಒಂದು ವರ್ಷ ಸಮಯ ಇದೆ, ಈಗಲೇ ಯಾಕೆ ಕಷ್ಟಪಡೋದು ಅಂತ ಪ್ರಯತ್ನಕ್ಕೆ ಪೂರ್ಣವಿರಾಮ ಇಡುತ್ತಿದ್ದೆ. ದಿನಗಳುರುಳಿ ಪರೀಕ್ಷೆಗೆ ಒಂದು ತಿಂಗಳೋ ಹದಿನೈದು ದಿನವೋ ಇರುವಾಗ ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡುವುದು.  ಮೊದಲಿದ್ದ ಉತ್ಸಾಹವನ್ನು ವರ್ಷ ಪೂರ್ತಿ ಕಾಯ್ದುಕೊಳ್ಳದೆ ನಿರೀಕ್ಷಿಸಿದ ಫಲ ಕಾಣಲಾಗುತ್ತಿರಲಿಲ್ಲ. ಮುಂದಿನ ಶೈಕ್ಷಣಿಕ ವರ್ಷದಲ್ಲಾದರೂ ಈ ತಪ್ಪು  ಮಾಡಬಾರದೆಂದು ಅಂದುಕೊಂಡರೂ ತಪ್ಪು ನಡೆದೇ ಹೋಗುತ್ತಿತ್ತು. ಈ ಅನುಭವ ಬಹಳ ಜನರಿಗೆ ಆಗಿರುತ್ತದೆ.

ಇದಷ್ಟೇ ಅಲ್ಲದೆ ನನ್ನ ಹಲವು ಅಭಿರುಚಿಗಳು ಅರಳುವ ಮುನ್ನವೇ ಬಾಡಿ ಹೋದ ಸಂಗತಿಗಳನ್ನು ತಿಳಿಸಲೇ ಬೇಕು. ಒಂದು ಬಾರಿ ನಮ್ಮ ಪರಿಚಯಸ್ಥರ ಮನೆಗೆ ಹೋದಾಗ ಅಲ್ಲಿ ಅವರ ಮಗಳು ಪೇಂಟಿಂಗ್ ಮಾಡುತ್ತಿದ್ದುದನ್ನು ನೋಡುತ್ತಿದ್ದಂತೆಯೇ ನನಗೂ ಕಲಿಯಬೇಕೆಂದೆನಿಸಿ ಅದರ ಬಗ್ಗೆ ಪೂರ್ವವಿಚಾರ ಮಾಡದೆ ಮರುದಿನವೇ ಥರಥರದ ಬಣ್ಣಗಳು, ವಿವಿಧ ಬ್ರಶ್ ಗಳು, ಕ್ಯಾನ್ವಾಸ್ ಫ್ರೇಮ್ ಎಲ್ಲ ತಂದಿಟ್ಟುಕೊಂಡೆ. ಮೊದಲ ಚಿತ್ರಬಿಡಿಸಿ ಬಣ್ಣ ತುಂಬುವಾಗ ಮನಸ್ಸೆಲ್ಲ ರಂಗು ರಂಗು. ಈ ಪ್ರಯೋಗವೆಲ್ಲ ಒಂದು ವಾರ ಕೂಡ ನಡೆಯಲಿಲ್ಲ ಪೇಂಟಿಂಗ್ ಸಾಮಗ್ರಿಗಳೆಲ್ಲ ಅಟ್ಟಹತ್ತಿದವು. ಸ್ವಾರಸ್ಯದ ಸಂಗತಿಯೆಂದರೆ ಟಿವಿ ಯಲ್ಲಿ  ಬರುತ್ತಿದ್ದ  ಸಂಗೀತದ ರಿಯಾಲಿಟಿ ಶೋಗಳನ್ನು ನೋಡಿ  ನನಗೂ ಸಂಗೀತ ಕಲಿಯಬೇಕೆನಿಸಿತು. ಗುರುಗಳನ್ನು ಹುಡುಕುವಮೊದಲೇ ಕೀಬೋರ್ಡ್ ತಂದಿಟ್ಟುಕೊಂಡೆ. ಗುರುಗಳು ಸಿಕ್ಕಿ ಒಂದೆರೆಡು ತಿಂಗಳು ಪಾಠಕ್ಕೆ ಸರಿಯಾಗಿ ಹೋದೆನೋ ಇಲ್ಲವೋ ಯಾಕೋ ಇದು ನನಗೆ ಒಗ್ಗುತ್ತಿಲ್ಲ ಎಂದು ಹೇಳಿ ಬಿಟ್ಟುಬಿಟ್ಟೆ.

ಇತ್ತೀಚೆಗೆ  ಬಾಯಿ ಚಪಲಕ್ಕೆ ಬಲಿಯಾಗಿ ಬಗೆಬಗೆಯ ತಿಂಡಿಗಳನ್ನು ತಿಂದು ತೂಕ ಹೆಚ್ಚಾಗಿದ್ದು ಗಮನಕ್ಕೆ ಬಂದೊಡನೆ ಕ್ಯಾಲೊರಿಗಳನ್ನು ಬರ್ನ್ ಮಾಡಲು ಅವರಿವರ ಸಲಹೆಯಂತೆ ಡಯಟ್ ಶುರು ಮಾಡಿದೆ. ರುಚಿ  ರುಚಿಯಾದ ಭಕ್ಷ್ಯಗಳು ಕಣ್ಣಿಗೆ ಬಿದ್ದರೂ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ಬರೀ ತರಕಾರಿಗಳನ್ನು ತಿನ್ನುವುದು. ಎರಡನೇ ದಿವಸಕ್ಕೆ ತೂಕ ನೋಡಿಕೊಂಡು ಅದರಲ್ಲಿ ಕೊಂಚವೂ ವ್ಯತ್ಯಾಸವಿಲ್ಲದಿದ್ದಾಗ ಎಷ್ಟು ಪಥ್ಯ ಮಾಡಿದರೂ ವ್ಯರ್ಥ ಪ್ರಯತ್ನವೆಂದು ಪಥ್ಯಮಾಡುವುದನ್ನೇ ನಿಲ್ಲಿಸಿದೆ. ಆಮೇಲೆ ಕೇಳಬೇಕೆ ಕನಸಿನಲ್ಲಿ ಕೂಡ ಕರಿದ ತಿಂಡಿಗಳ ಮೆರವಣಿಗೆ. ಸ್ವಲ್ಪ ದಿನಗಳಾದ ಮೇಲೆ ನನ್ನ ಆಪ್ತರೊಬ್ಬರು ಕೊಟ್ಟ ಯೋಗದ ಸಲಹೆ ಮನಸ್ಸಿಗೆ ತುಂಬಾ ಹಿಡಿಸಿತು. ಮನೆಯ ಹತ್ತಿರವೇ ಪತಂಜಲಿ ಯೋಗ ಹೇಳಿಕೊಡುತ್ತಾರೆ ಅದೂ ಉಚಿತವಾಗಿ ಎಂದು ಗೊತ್ತಾದೊಡನೆ ನಾಳೆಯೇ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಿಳಿಯುವೆನೇನೋ ಅನ್ನುವಷ್ಟು ಉತ್ಸಾಹ ತುಂಬಿಕೊಂಡು ಯೋಗ ತರಗತಿಗೆ ಸೇರಿಕೊಂಡೆ. ಸ್ವಲ್ಪ ದಿನಗಳಲ್ಲಿ ಮತ್ತದೇ ಆರಂಭ ಶೂರತ್ವವೆಂಬ ಸೋಂಕು ತಗುಲಿ ಯೋಗಕ್ಕೂ ಎಳ್ಳುನೀರು ಬಿಟ್ಟಿದ್ದಾಯ್ತು.

ಹೀಗೆ ನನ್ನ ಬಗ್ಗೆ ನಾನೇ ಯೋಚಿಸುತ್ತಿದ್ದ ಹಾಗೆ ಒಂದು ಸತ್ಯವಂತೂ ಅರಿವಾಯಿತು. ನನ್ನ ಈ ಅಭ್ಯಾಸದಿಂದಾಗಿ ನಾನು ಎಷ್ಟೋ ಅವಕಾಶಗಳಿಂದ ವಂಚಿತಳಾಗಿದ್ದೆ. ಪ್ರಾರಂಭದಿಂದ ಅಂತ್ಯದವರೆಗೂ ಅದೇ ಹುಮ್ಮಸ್ಸು ಮತ್ತು ತಾಳ್ಮೆಯಿಂದ ಕಲಿತಿದ್ದರೆ ಕಡೆ ಪಕ್ಷ ಒಂದು ವಿಷಯದಲ್ಲಾದರೂ ಪರಿಣಿತಿಯನ್ನು ಹೊಂದಬಹುದಿತ್ತು. ನನ್ನ ಮುಂದಿದ್ದ ಹತ್ತು ಹಲವು ದಾರಿಗಳಲ್ಲಿ ಹತ್ತು ಅಡಿಗಳಷ್ಟು ಕೂಡ ಮುಂದೆ ಹೋಗಲು ಸಾಧ್ಯವಾಗದಿದ್ದಕ್ಕೆ ಖಂಡಿತಾ ಬೇಸರವಿದೆ. ಒಂದೊಂದು ಅಡಿಯಷ್ಟು ಗುಂಡಿಯನ್ನು ಹತ್ತು ಕಡೆ ತೋಡುವುದರ ಬದಲು ಒಂದೇ ಕಡೆ ತೋಡಿದ್ದಿದ್ದರೆ ಯಶಸ್ಸೆಂಬ ನೀರು ಸಿಕ್ಕಿರುತ್ತಿತ್ತು. ಈ ಪ್ರಪಂಚದಲ್ಲಿ ನನ್ನದೇ ಮನಸ್ಥಿತಿಯವರು ಬಹಳಷ್ಟು ಜನ ಇರಬಹುದು. ಈ ಆರಂಭಶೂರತ್ವ ಅನ್ನುವುದು ಕೆಲವರ ದೌರ್ಬಲ್ಯ ಕೂಡ ಆಗಿರುತ್ತದೆ. ಯಾವ ಕೆಲಸವನ್ನೂ ಪೂರ್ತಿಯಾಗಿ ಮಾಡಲಾಗದೆ ಬೇರೆಯವರ ಯಶಸ್ಸನ್ನು ನೋಡಿ ಒಳಗೊಳಗೇ ಕರುಬುವುದೊಂದೇ ಅವರ ಮುಖ್ಯಕೆಲಸವಾಗಿ ಬಿಡುತ್ತದೆ. ಕ್ಷಣಾರ್ಧದಲ್ಲಿ  ನೂರಾರು ಮೈಲಿ ಮುಂದೆ ಓಡುವಂತಹ ತಂತ್ರಜ್ಞಾನದ ಯುಗದಲ್ಲಿ ನಾವು ಹೀಗಿದ್ದರೆ ಬದುಕಲು ಸಾಧ್ಯವೇ? ನಮ್ಮನ್ನು ನಾವು ಬದಲಾಯಿಸಿಕೊಳ್ಳದಿದ್ದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಕುರುಡರಂತಾಗುತ್ತೇವೆ. ನನ್ನಂತೆಯೇ ಆರಂಭ ಶೂರತ್ವದ ಸೋಂಕಿನಿಂದ ಬಳಲುತ್ತಿರುವ ಬಂಧುಗಳೇ ನಮ್ಮ ಕಣ್ಣಿಗೆ ನಾವೇ ಕಟ್ಟಿಕೊಂಡ ಬಟ್ಟೆಯನ್ನು ಬಿಚ್ಚೋಣ. ಆರಂಭ ಶೂರರೆಂಬ ಹಣೆ ಪಟ್ಟಿಯನ್ನು ಕಿತ್ತೆಸೆಯೋಣ. ಹತ್ತು ಕೆಲಸಗಲ್ಲಿ ತೋರಿಸುವ ಉತ್ಸಾಹವನ್ನು ಒಂದೇ ಕೆಲಸದಲ್ಲಿ ತೋರಿಸಿ ಯಶಸ್ವಿಯಾಗೋಣ.

ಈಗ ಸಧ್ಯಕ್ಕೆ ನನ್ನ ಮುಂದಿರುವ ಗುರಿಯೆಂದರೆ ಡ್ರೈವಿಂಗ್ ಕಲಿಯುವುದು. ಮೂರು ತಿಂಗಳ ಒಳಗೆ  ನಮ್ಮ ಕಾರನ್ನು ನಾನೇ ಸ್ವತಂತ್ರವಾಗಿ ಫ್ರೀ ವೇ ಗಳಲ್ಲಿ ಓಡಿಸುವುದು. ಈ ಗುರಿಯ ಸಾಧನೆಗಾಗಿ ನನ್ನೆಲ್ಲ ಉತ್ಸಾಹವನ್ನು ಒಟ್ಟುಗೂಡಿಸಿದ್ದೇನೆ. (ದಯವಿಟ್ಟು ಇದನ್ನು ಆರಂಭ ಶೂರತ್ವದ ಸೋಂಕಿನ ಪ್ರಥಮ ಹಂತವೆಂದು ಪರಿಗಣಿಸದಿರಿ!!) ನೀವೂ ಸಹ ನಿಮ್ಮ ಗುರಿಯ ಬಗ್ಗೆ ಚಿಂತಿಸಿ, ಮತ್ತು ಅದರಲ್ಲಿ ಯಶಸ್ವಿಯಾಗಿರೆಂದು ಹಾರೈಸುತ್ತೇನೆ.

ಸೋಮವಾರ, ಮೇ 10, 2010

ಅಮ್ಮಾ, ನಿನ್ನ ಎದೆಯಾಳದಲ್ಲಿ...








"ಅಮ್ಮಾ,  ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು..." 

ಬಿ.ಆರ್. ಲಕ್ಷ್ಮಣರಾವ್ ಅವರ ರಚನೆಯ ಈ ಗೀತೆ ಛಾಯಾ ಅವರ ಕಂಠ ಸಿರಿಯಲ್ಲಿ ಮಧುರವಾಗಿ ತೇಲಿಬರುತ್ತಿತ್ತು. ಎಂತಹ ಅರ್ಥಗರ್ಭಿತವಾದ ಭಾವಗೀತೆ ಅದು. ಕೇಳು ಕೇಳುತ್ತಿದಂತೆಯೇ ನಾನು ಅಮ್ಮನ ಬಳಿಗೆ ಹೋಗಿ ಬಿಟ್ಟಿದ್ದೆ. ನಮಗೆ ಎಷ್ಟೇ ಸಂತಸವಾದಾಗಲೂ ತುಂಬಾ ದುಃಖವಾದಾಗಲೂ ಮೊದಲು ಮನಸಿಗೆ ಬರುವುದು ಅಮ್ಮನೇ..  ಓಡಿಹೋಗಿ ಅವಳ ಬಳಿ ನಮ್ಮ ಸಂತೋಷ ಹಂಚಿಕೊಳ್ಳುತ್ತೇವೆ. ನಮ್ಮ ಸಂತೋಷ ನೋಡಿ ಆಕೆಯ ಆನಂದ ದುಪ್ಪಟ್ಟಾಗುತ್ತದೆ. ದುಃಖ ವಾದರೂ ಸರಿ ಅಮ್ಮನ ಮಡಿಲಿನಲ್ಲಿ ಮಲಗಿ ಎಲ್ಲ ಹೇಳಿಕೊಂಡಾಗ ಮನಸು ನಿರಾಳವಾಗುತ್ತದೆ. ಬಹುಶಃ ಅದಕ್ಕೆ ಹೇಳಿದ್ದಾರೇನೋ ದೇವರು ನಮಗೆ ಕೊಟ್ಟ ಅದ್ಭುತ ಕಾಣಿಕೆ ಅಂದ್ರೆ "ಅಮ್ಮ".

ಮದರ್'ಸ್  ಡೇ ಪ್ರಯುಕ್ತ ಅಮ್ಮನ ಬಗ್ಗೆ ಏನಾದರೂ ಬರೆಯಬೇಕೆನಿಸಿತು. ಸರಿ ಬರೆಯೋಣವೆಂದು ಪೆನ್ನು ಕೈಯಲ್ಲಿ ಹಿಡಿದರೆ ಅಮ್ಮನ ಬಗ್ಗೆ ಏನು ಬರೆಯಬೇಕು? ಏನೆಲ್ಲಾ ಬರೆಯಬಹುದು... ಎಷ್ಟುಬರೆದರೂ ಅದು ಕಡಿಮೆಯೇ.. ನನಗೆ ಸಾಧ್ಯವಾದಷ್ಟು ಬರೆದಿದ್ದೇನೆ.

ಸಾಮಾನ್ಯ ಮಧ್ಯಮ ವರ್ಗದ ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ನನ್ನ ಅಮ್ಮ ಮದುವೆಯಾಗಿ ಬಂದಿದ್ದು ಕೂಡ ಮಧ್ಯಮ ವರ್ಗದ ಕುಟುಂಬಕ್ಕೆ. ನಾನು ಹುಟ್ಟಿದ ಮೂರು ನಾಲ್ಕು ವರ್ಷಗಳಲ್ಲಿ ಅತ್ತೆ ಮಾವ ಇಬ್ಬರನ್ನೂ ಕಳೆದುಕೊಂಡಳು. ಆಗ ಸ್ವಲ್ಪ ಕಷ್ಟವಿತ್ತೆಂದು ಹೇಳುತ್ತಿದ್ದಳು. ಅಮ್ಮನ ಪ್ರಪಂಚ ಬಹಳ ಚಿಕ್ಕದು. ಅವಳ ಪ್ರಪಂಚದಲ್ಲಿ ಅಪ್ಪ ನಾನು ಮತ್ತು ನನ್ನ ತಂಗಿ ಅಷ್ಟೇ. ಸದಾ ನಮ್ಮ ಬಗ್ಗೆಯೇ ಯೋಚಿಸುತ್ತಿದ್ದಳು. ನಾವು ಚಿಕ್ಕವರಿದ್ದಾಗ ಅಮ್ಮನೊಂದಿಗೆ ದಿನವೂ ದೇವರ ಪೂಜೆ ಮಾಡುತ್ತಿದ್ದೆವು. ಆಗ ಅಮ್ಮ ಹೇಳುತ್ತಿದ್ದ ಆರತಿಯ ಹಾಡುಗಳು ಅರಿವಿಲ್ಲದಂತೆಯೇ ನನ್ನ ಮನಸ್ಸಿನಲ್ಲಿ ರೆಕಾರ್ಡ್ ಆಗಿಬಿಟ್ಟಿವೆ. ರಾತ್ರಿ ಕೈತುತ್ತು ತಿನ್ನುತ್ತ ಕೇಳುತ್ತಿದ್ದ ಕಥೆಗಳನ್ನೆಲ್ಲಾ ನಿಜವೆಂದೇ ನಂಬಿದ್ದೆವು. ನಾನು ಒಂದನೇ ಕ್ಲಾಸಿನಲ್ಲಿ ಹಾಡಿನ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿದ್ದ ದಿನ ನಮ್ಮ ನೆರೆಹೊರೆಯವರಿಗೆಲ್ಲ ಹೇಳಿ ಅದೆಷ್ಟು ಖುಷಿ ಪಟ್ಟಿದ್ದು ನನಗಿನ್ನೂ ನೆನಪಿದೆ. ಇನ್ನು ನಾನು ಭೂಮಿಗೆ ಬಂದ ದಿನ ಅದೆಷ್ಟು ಖುಷಿ ಪಟ್ಟಿರಬಹುದು. ಬೇಸಿಗೆ ರಜೆ ಬಂದರೆ ಸಾಕು ಅಮ್ಮನೊಂದಿಗೆ ಸಂಡಿಗೆ ಇಡುವುದು, ಹಪ್ಪಳ ಮಾಡುವುದು, ಮುಂದಿನ ಕ್ಲಾಸಿನ ಪಾಠ ಗಳನ್ನ ಹೇಳಿಸಿಕೊಳ್ಳುವುದು, ಆಟ ಆಡುವುದು.. ಅಬ್ಬಾ!!! ಎಂಥ ಆನಂದದ ದಿನಗಳವು. ನನ್ನ ಬಾಲ್ಯವನ್ನು ಬಹಳ ಸುಂದರಗೊಳಿಸಿದ್ದಕ್ಕೆ ಅಮ್ಮ ನಿನಗೆ ಕೋಟಿ ಪ್ರಣಾಮಗಳು.  ಇಂತಿಪ್ಪ ಅಮ್ಮನ ಬಗ್ಗೆ ಎಷ್ಟು ಬೇಕಾದರೂ ಬರೆಯಬಹುದು. ನನ್ನ ಅಮ್ಮ ಶಿಸ್ತಿನ ವಿಷಯದಲ್ಲಿ ಮಾತ್ರ ಬಹಳ ಕಟ್ಟುನಿಟ್ಟು. ಸ್ವಲ್ಪ ತಪ್ಪು ಮಾಡಿದರೂ ಶಿಕ್ಷೆ ಖಂಡಿತಾ. ಆಗೆಲ್ಲ ಅಮ್ಮನನ್ನು ಬಯ್ದುಕೊಳ್ಳುತ್ತಿದ್ದೆ. ಆದರೆ ಆಕೆ ಹಾಗೆ ಮಾಡಿದ್ದರಿಂದಲೇ ನಾವೀಗ ಶಿಸ್ತಿನಿಂದ ಇರುವುದೆಂದು ಮನವರಿಕೆಯಾಗಿದೆ. ಅಮ್ಮನಿಗೆ ಯಾವಾಗಲು ನಮ್ಮ ಓದಿನ ಬಗ್ಗೆಯೇ ಚಿಂತೆ. . ಬಡತನದ ಕಷ್ಟಗಳನ್ನೆಲ್ಲ ಸಾಕಷ್ಟು ಅನುಭವಿಸಿದ್ದರಿಂದ ತನ್ನ ಮಕ್ಕಳಿಗೆ ಹಾಗಾಗಬಾರದೆಂದು ಸದಾ ಓದಲು ಪ್ರೇರೆಪಿಸುತ್ತಿದ್ದಳು  ಮನುಷ್ಯನನ್ನು ಹಣದಿಂದ ಸೋಲಿಸುವುದಕ್ಕಾಗದಿದ್ದರೂ ವಿದ್ಯೆಯಿಂದ ಖಂಡಿತಾ ಸೋಲಿಸಬಹುದೆಂದು ಹೇಳುತ್ತಿದ್ದಳು. ಚಿಕ್ಕವಯಸ್ಸಿನಲ್ಲಿ ಈ ಮಾತುಗಳೆಲ್ಲ  ನಮಗೆ ಅರ್ಥವೇ ಆಗುತ್ತಿರಲಿಲ್ಲ. ಅವಳು ಇದನ್ನೆಲ್ಲಾ ಹೇಳುವಾಗ ಗಂಭೀರವಾಗಿ ಕೇಳುತ್ತಿದ್ದೆವು ಅಷ್ಟೇ. ಆದರೆ ಪರೀಕ್ಷೆಯಲ್ಲಿ ಜಾಸ್ತಿ ಅಂಕ ಪಡೆದರೆ ಖುಷಿ ಪಡುತ್ತಾಳೆ ಎಂಬುದು ಮಾತ್ರ ನಮಗಾಗ ಗೊತ್ತಿದ್ದ ಸತ್ಯ. 5 ನೇ ಕ್ಲಾಸ್ ಮುಗಿಸಿ ನವೋದಯ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಅಮ್ಮನಿಗೆ ನಾನೇನೋ ದೊಡ್ಡ ಗುರಿ ಸಾಧಿಸಿದಷ್ಟು ಆನಂದ. ನಾನು ಮನೆಯನ್ನು ಬಿಟ್ಟು ಬೋರ್ಡಿಂಗ್ ಸ್ಕೂಲ್ ಗೆ ಸೇರುವಾಗ ಅಮ್ಮ ಹೇಳಿದ್ದೊಂದೇ ಮಾತು ಗುರಿಸಾಧನೆಯ ಪ್ರಥಮ ಸೋಪಾನವಿದು, ಚೆನ್ನಾಗಿ ಓದು ನಾನು  ಯಾವಾಗಲು ನಿನ್ನೊಂದಿಗೆ ಇರುತ್ತೇನೆ ಅಂತ. ಆದರೆ ನನ್ನನ್ನು ಮನೆಯಿಂದ ಕಳಿಸುವಾಗ ಒಳಗೊಳಗೇ ಎಷ್ಟು ಬಿಕ್ಕಿದ್ದಳೋ ನನ್ನ ಎದುರು ಮಾತ್ರ ಬಹಳ ಕಾನ್ಫಿಡೆಂಟ್ ಆಗಿರುವಂತೆ ತೋರಿಸಿಕೊಳ್ಳುತ್ತಿದ್ದಳು. ಅವಳ ಕಣ್ಣುಗಳಲ್ಲಿ ದುಃಖ ಮಡುಗಟ್ಟಿತ್ತು. ಸ್ವಲ್ಪ ದಿನಗಳ ನಂತರ ಇಬ್ಬರೂ ಹೊಂದಿಕೊಂಡು ಬಿಟ್ಟೆವು.

ನಾನು SSLC ಮುಗಿಸಿದ  ನಂತರ ಯಾವ ಕಾಲೇಜಿಗೆ ಸೇರಬೇಕೆಂದು ಗೊಂದಲದಲ್ಲಿದ್ದೆ. ಆಗ ಹರಿಹರದ ಕಿರ್ಲೋಸ್ಕರ್ ಎಂಬೋ ಕಿರ್ಲೋಸ್ಕರ್ ಕಂಪನಿಯೇ ಬೀಗ ಮುದ್ರೆ ಜಡಿದುಕೊಂಡು ಕುಳಿತಿತ್ತು. ಅಪ್ಪನಂತೆಯೇ ಇತರ ಮೂರು ಸಾವಿರ ಜನರ ಬದುಕು ಅತಂತ್ರವಾಗಿಬಿಟ್ಟಿತ್ತು. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಕೂಡ ಅಮ್ಮ ಧೃತಿಗೆಡದೆ ನಿಭಾಯಿಸಿದಳು. hats off ಅಮ್ಮಾ..  ಅಷ್ಟೆಲ್ಲ ಕಷ್ಟ ಇದ್ದರೂ ಅದನ್ನು ತೋರಗೊಡದೆ ನಮ್ಮ ಓದಿಗೆಲ್ಲಿ ಅಡ್ಡಿಬರುತ್ತದೋ ಎಂದು ನನ್ನನ್ನು ಶಿವಮೊಗ್ಗೆಯ DVS ಗೆ ಸೇರಿಸಿದಳು. ನೀನು ಚೆನ್ನಾಗಿ ಓದಿದರೆ ಸಾಕು ಮನೆ ಮಾರಿಯಾದರೂ ನಿನ್ನ ಓದಿಸುತ್ತೇನೆ ಎಂದು ಹೇಳುತ್ತಿದ್ದಳು. ನಾನು ಓದುವಾಗ ವಯೋಸಹಜ ಆಸೆಯಿಂದ ಇಂಥದ್ದೇ ಬಟ್ಟೆ ಬೇಕು ಇಂಥದ್ದೇ ವಸ್ತು ಬೇಕೆಂದು ಹಠ ಹಿಡಿಯುತ್ತಿದ್ದೆ. ಇದರಿಂದ ಹುಟ್ಟುತ್ತಿದ್ದ ಕೀಳರಿಮೆಯನ್ನೆಲ್ಲ ಅಮ್ಮ ತನ್ನ ಮಾತುಗಳಿಂದ ಹೊಗಲಾಡಿಸುತ್ತಿದ್ದಳು.  ಜ್ಞಾನವಿಲ್ಲದ ಆಕಾಂಕ್ಷೆ ಲಗಾಮು ಇಲ್ಲದ ಕುದುರೆಯಿದ್ದಂತೆ ಎಂದು ಹೇಳಿ ನನ್ನ ಮನಸನ್ನು ಓದುವುದರ ಕಡೆಗೆ ತಿರುಗಿಸುತ್ತಿದ್ದಳು. ಮರುದಿನವೇ ಅದಮ್ಯ ಉತ್ಸಾಹದಿಂದ ನಾನು ಕಾಲೇಜಿಗೆ ಹೋಗಲು ತಯಾರಾಗಿರುತ್ತಿದ್ದೆ. ಅಮ್ಮ ತುಂಬಾ practical ಆಗಿ ಯೋಚನೆ ಮಾಡುತ್ತಿದ್ದಳು. ಮದುವೆ  ಅಥವಾ ಗಂಡ ಸಂಸಾರ ಎಂದು ಎಂದೂ ಬೋಧನೆ ಮಾಡಲಿಲ್ಲ. ನಾನು ಧೈರ್ಯದಿಂದ ಆರ್ಥಿಕವಾಗಿ ಸ್ವತಂತ್ರವಾಗಿ ಬದುಕಬೇಕೆಂಬುದು ಅವಳ ಆಸೆ.  ಯಾವುದೋ ರಾಜಕುಮಾರ ಕುದುರೆಯಮೇಲೆ ಬಂದು ನಿನ್ನ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ಕನಸು ಕಾಣಬೇಡ. ಜೀವನದಲ್ಲಿ ಎಂಥ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೋ ಗೊತ್ತಿಲ್ಲ. ಕನಸಿಗೂ ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆಯೆಂದು ಹೇಳುತ್ತಿದ್ದಳು. ಸ್ವಲ್ಪ ಹಿಂಜರಿಕೆಯ ಸ್ವಭಾವದವಳಾದ ನನಗೆ ಟನ್ ಗಟ್ಟಲೆ ಧೈರ್ಯವನ್ನು ತುಂಬಿದ್ದಾಳೆ. ಎಲ್ಲ ವಿಷಯದಲ್ಲೂ ನನಗೆ ಆಧಾರವಾಗಿದ್ದಾಳೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾನು ಅಮ್ಮನನ್ನು ಕೇಳುತ್ತೇನೆ. ಆ ಕ್ಷಣಕ್ಕೆ ಅವಳು ಬಳಿಯಲ್ಲಿ ಇಲ್ಲದಿದ್ದರೆ ಮನಸ್ಸಿನಲ್ಲೇ ಅವಳಿಗೆ ಎಲ್ಲ ಹೇಳುತ್ತೇನೆ. ಏನೋ ಒಂಥರಾ ಸಮಾಧಾನ. ಕೋಪ ಬಂದಾಗ ಎಷ್ಟೋ ಸಲ ಅಮ್ಮನೊಂದಿಗೆ ಮುನಿಸಿಕೊಂಡಿದ್ದೇನೆ. ನಿನಗೇನೂ ಗೊತ್ತಾಗಲ್ಲ ಸುಮ್ನಿರಮ್ಮ ಅಂತ ಅವಳ ಮಾತನ್ನ ತಳ್ಳಿ ಹಾಕಿದ್ದರೂ  ಅಮ್ಮನಿಗೆ ಮಾತ್ರ ನನ್ನ ಕಂಡರೆ ಅದೆಷ್ಟು ಪ್ರೀತಿಯೋ ಹೇಳಲಾರೆ. ನನ್ನ ಮದುವೆ ನಿಶ್ಚಯವಾದ ಮೇಲೆ ಮಂಕಾಗಿರುತ್ತಿದ್ದಳು. ಮಗಳ ಮದುವೆಯೆಂಬ ಖುಷಿದ್ದರೂ ನಮ್ಮನ್ನ ಬಿಟ್ಟು ದೂರದ ದೇಶಕ್ಕೆ ಹಾರಿಬಿಡುತ್ತಾಳಲ್ಲ ಎಂಬ ಯಾತನೆ ತುಂಬಾ ಇತ್ತು. ಪ್ರಾಯಶಃ  ಈಗಲೂ ನನ್ನ ಬಗ್ಗೆಯೇ ಯೋಚಿಸುತ್ತಿದ್ದಾಳೆನೋ.. ನಾವು ಏನೇ ಮಾಡಿದರೂ ಪಾಪ ಅಮ್ಮ ಮಾತ್ರ ನಮ್ಮನ್ನು ಸಪೋರ್ಟ್ ಮಾಡೇ ಮಾಡುತ್ತಾಳೆ. ಅಮ್ಮನ ಪ್ರೀತಿಯೇ ಅಂಥದ್ದು. ಚಿಕ್ಕಂದಿನಲ್ಲಿ ಹೇಳುತ್ತಿದ್ದ ಪದ್ಯವೊಂದು ಬಿಟ್ಟು ಬಿಡದೆ ನನ್ನ ಕಾಡುತ್ತಿದೆ..

ಚೆಲುವೆಯಾರೋ ನನ್ನ ತಾಯಿಯಂತೆ
ಸತ್ಯಕ್ಕೆ ನೆಲೆಯಾದ ಒಲವಿನಂತೆ

ಕಣ್ಣೆರಡು ನಕ್ಷತ್ರ ಬಣ್ಣ ನೀಲಿ
ಕುಡಿನೋಟ ಹೊರಟಿತೂ ಮಿಂಚುತಾಳಿ
ಹಸಿರನುಡುವಳು ಅಮ್ಮ ಹರುಷದಲ್ಲಿ
ಉಸಿರಾಡುಳು ಮರುಗ ಮಲ್ಲಿಗೆಯಲ್ಲಿ

ಉದಯರವಿ ಹಣೆಗಿಟ್ಟ ಭಾಗ್ಯಬಿಂಬ
ಆಗಸದಾ ಕಪ್ಪು ಜಡೆ ಬೆನ್ನತುಂಬಾ
ಸಾಲು ಸೇರುವ ಹಸಿರು ಸಾಲು ಸಾಲೆ
ಸರವಾಗಿ ಮೆರೆಯುತಿದೆ ಎದೆಯ ಮೇಲೆ..

ಚೆಲುವೆಯಾರೋ ನನ್ನ ತಾಯಿಯಂತೆ
ಸತ್ಯಕ್ಕೆ ನೆಲೆಯಾದ ಒಲವಿನಂತೆ

ಹೌದು, ಅಮ್ಮನ ಚೆಲುವೆಯೇ.. ಅಮ್ಮನ ಚೆಲುವು ಅವಳ ಪ್ರೀತಿ ವಿಶ್ವಾಸ. ಅಮ್ಮನ ಎಲ್ಲ ಪ್ರೀತಿ ನನಗೆ ಸಿಗಬೇಕೆನ್ನುವ ಸ್ವಾರ್ಥ ನನ್ನದು. ಎಷ್ಟು ಪ್ರೀತಿ ಕೊಟ್ಟರೂ ನನಗೆ ಸಾಕೆನಿಸುವುದಿಲ್ಲ. ಅಮ್ಮನನ್ನು ನೆನಪಿಸಿಕೊಳ್ಳಬೇಕಿಲ್ಲ ಅವಳು ನಮ್ಮ ಹೃದಯದಲ್ಲೇ ಇದ್ದಾಳೆ. ಆದರೂ ಈ ಅಮ್ಮಂದಿರ ದಿನ ಅವಳು ನನ್ನೊಂದಿಗಿಲ್ಲದ್ದರಿಂದ ಮನಸು ಭಾರವಾಗಿದೆ. ಈ ದಿನ ನಿಂಗೆ ಮಾತು ಕೊಡ್ತಿದೀನಿ ಅಮ್ಮಾ.. ನನ್ನ ಬಗ್ಗೆ ನೀನು ಕಂಡ ಕನಸುಗಳನ್ನೆಲ್ಲ ಸಾಕಾರಗೊಳಿಸಿದ ಮೇಲೆ ನಿನ್ನೆದುರು ಬಂದು ನಿಲ್ಲುತ್ತೀನಿ.. ಆಗ ನಿನ್ನ ಕಣ್ಣಲ್ಲಿ ಜಗತ್ತನ್ನೇ ಗೆದ್ದ ಖುಷಿಯನ್ನ ಕಂಡೇ ಕಾಣುತ್ತೀನಿ love you amma love you so much .....

 

ಗುರುವಾರ, ಮಾರ್ಚ್ 11, 2010

ಯಡಕುಮರಿಯ ಚಾರಣ


ಮುನ್ನುಡಿ: ಬ್ಲಾಗೊದಯದಲ್ಲಿ ನನ್ನ ಸವಿನೆನಪುಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದಹಾಗೆ ನನ್ನ ಯಡಕುಮರಿಯ ಚಾರಣದ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇನೆ. ಯಡಕುಮರಿ ಚಾರಣಿಗರಿಗೆ ಅತ್ಯಂತ ಪ್ರಿಯವಾದ ಜಾಗ. ಇದನ್ನು ಗ್ರೀನ್ ರೂಟ್ ವ್ಯಾಲಿ ಟ್ರೆಕ್ಕಿಂಗ್ ಅಂತಲೂ ಹೇಳುತ್ತಾರೆ.  ಸಕಲೇಶಪುರದಿಂದ ಸುಬ್ರಹ್ಮಣ್ಯದ ವರೆಗೂ ರೈಲ್ವೆ ಹಳಿಯ ಮೇಲೆ ನಡೆಯುತ್ತಾ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ರೈಲ್ವೆ ಮಾರ್ಗವು ಬಹಳಷ್ಟು ಸುರಂಗಗಳು ಹಾಗು ಸೇತುವೆಗಳಿಂದ ಕೂಡಿರುವುದೇ ಚಾರಣಕ್ಕೆ ಹೊರಡಲು ಪ್ರಮುಖ ಆಕರ್ಷಣೆ. ಈ ರೈಲ್ವೆ ಹಳಿಯಮೇಲೆ ಬರಿ ಗೂಡ್ಸ್ ಟ್ರೈನ್ ಮಾತ್ರ ಹೊರಡುತ್ತದೆ. ನಾವು ಹೋಗುವಾಗ ಪ್ಯಾಸೆಂಜರ್ ಟ್ರೈನ್ ಇನ್ನೂ ಹೊರಟಿರಲಿಲ್ಲ. ಹಳೆಯ ಟ್ರ್ಯಾಕನ್ನು ಸರಿಪಡಿಸುವ ಕೆಲಸ ನಡೆಯುತ್ತಿತ್ತು. ಬಹುಶಃ ಭೂಕುಸಿತದ ಭಯದಿಂದ ಈ ಹಳಿಯ ಮೇಲೆ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.  ನನ್ನ ನೆನಪಿನ ಬುತ್ತಿಗೆ ೨೦೦೭ ರಲ್ಲಿ ಈ ಚಾರಣ ಸೇರ್ಪಡೆಯಾಯಿತು. AIMS ಕಾಲೇಜಿನ ದಿನಗಳಲ್ಲೇ ಈ ಚಾರಣದ ಮೂರು ದಿನಗಳು ಜೀವಮಾನವಿಡೀ ನೆನಪಿನಲ್ಲಿ ಉಳಿಯುವಂತಹವು. ನನ್ನ ಡೈರಿಯಲ್ಲಿ ಈ ಚಾರಣದ ಕುರಿತಾಗಿ ಬಹಳ ರಸವತ್ತಾಗಿ ಬರೆದಿದ್ದೆ. ಇದರಲ್ಲಿ ನಾವು ಚಾರಣ ಪೂರ್ವ ಮಾಡಿಕೊಂಡ ಸಿದ್ಧತೆ, ಚಾರಣ ಮಾಡಿದ ರೀತಿ, ಪಟ್ಟ ಪಾಡು, ಹರಟೆ ಎಲ್ಲ ಸೇರಿದೆ. ಯಡಕುಮರಿಗೆ ಚಾರಣ ಹೊರಡುವವರಿಗೆ ಇದು ಮಾರ್ಗದರ್ಶಿಯೂ ಆಗಬಲ್ಲದು. ಈ ಚಾರಣದ ಕಥೆಯನ್ನು ಓದುತ್ತಿರುವಾಗ ನಿಮಗೂ ನಿಮ್ಮ ಪ್ರವಾಸದ ಕಥೆ ನೆನಪಾಗಬಹುದು. ಈ ಪ್ರವಾಸ ಕಥನವನ್ನು ಓದುವಾಗ ಎಲ್ಲಿಯೂ ನಿಮಗೆ ಬೇಸರವಾಗುವುದಿಲ್ಲ.. ಓದುತ್ತಿದ್ದಂತೆಯೇ ನೀವು ಆ ಕಥೆಯ ಒಂದು ಭಾಗವೇ ಆಗಿದ್ದೀರೆನೋ ಎಂದು ಖಂಡಿತಾ ಅನಿಸುತ್ತದೆ. ನೀವು ಇದನ್ನು ಇಷ್ಟ ಪಡುತ್ತೀರೆಂಬ ಭರವಸೆಯೂ ನನಗಿದೆ. 

'ಯಡಕುಮರಿಯ ಚಾರಣ' ದ ಬಗ್ಗೆ ಬಹಳಷ್ಟು ಬಾರಿ ದಿನಪತ್ರಿಕೆಗಳಲ್ಲಿ ಓದಿದ್ದಿದೆ. ಬಹಳ ದಿನಗಳಿಂದಲೂ ಇಲ್ಲಿಗೆ ಚಾರಣಕ್ಕೆ ಹೊರಡುವ ಆಸೆ ಇದ್ದರೂ ಅದೂ ಕೈಗೂಡಿದ್ದು ಮಾತ್ರ ಆಕಸ್ಮಿಕ. ಅಪ್ಪಟ ಶಾಲೆಯಂತಿರುವ ನಮ್ಮ ಕಾಲೇಜಿನಲ್ಲಿ ದಸರಾ ಹಬ್ಬಕ್ಕಾಗಿ ಒಂದು ವಾರ ರಜೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಒಂದು ವಾ..ರ...?? ಒಂದು ವಾರವನ್ನು ಹೇಗೆ ಕಳೆಯಬಹುದು ಎಂದು ಲೆಕ್ಕ ಹಾಕುತ್ತಿರುವಾಗಲೇ ಪರಿ, ಅಶ್ವಿನ್, ಹರೀಶ್ ಟ್ಯುಶನ್ ನಲ್ಲಿ ಪಾಠ ಕೇಳದೆ ರಜವನ್ನು ಮಜವಾಗಿ ಕಳೆಯುವುದು ಹೇಗೆ ಎಂದು ಯೋಚಿಸುತ್ತಿದ್ದರು. ಸರಿ ಮೂರು ಜನರೂ ಸೇರಿ ಯಡಕುಮರಿಯ ಚಾರಣಕ್ಕೆ ಹೋಗೋಣ ಎಂದು ತೀರ್ಮಾನಿಸಿದರು. ಸ್ನೇಹಿತರ ವರ್ತುಲದಲ್ಲಿ ಇದು ಚರ್ಚೆಗೆ ಗ್ರಾಸವಾಯಿತಾದರೂ ಕೊನೆಗೆ ಚಾರಣಕ್ಕೆ ಹೊರಡುವುದೆಂದು ನಿಶ್ಚಯಿಸಲಾಯಿತು.ಸಮಯದ ಅಭಾವವಿದ್ದರೂ  ತರಾತುರಿ ತಯಾರಿ ಶುರುಮಾಡಿದೆವು. ಶನಿವಾರ ಅಂದರೆ  ತಾ.13 -10 -07 ರಂದು ಮನೆಯಲ್ಲಿ ಎಲ್ಲರೂ ಸೇರಿ ಸಾಮಾನಿನ ಲಿಸ್ಟ್ ಮಾಡಿಕೊಂಡೆವು. ನಾಳೆ ರಾತ್ರಿ ಹೊರಡುವುದಾಗಿ ಮಾತಾಡಿಕೊಂಡೆವು. ಹರೀಶ್ ಹೋಗಿ ಟಿಕೆಟ್ ಬುಕ್ ಮಾಡಿಸಿದ.

   14 /10 /07   -  ಭಾನುವಾರ
ನನಗೆ ವಹಿಸಿದ ಕೆಲಸದಂತೆ ಹಣ್ಣು ಹಂಪಲಗಳನ್ನು ತೆಗೆದುಕೊಂಡು ರಾತ್ರಿ 8 ಕ್ಕೆ ಪರಿಯ ಮನೆಗೆ ಹೋದೆ. ಅಲ್ಲಿ ಅವರಿನ್ನೂ ಸಾಮಾನು ಜೋಡಿಸಿಕೊಳ್ಳುತ್ತಿದ್ದರು. ನಾವೆಲ್ಲಾ ಅಂದರೆ ನಾನು, ರಶ್ಮಿ, ಚಂದ್ರಿಕಾ, ವಿಭಾ, ಪರಿ, ಅಶ್ವಿನ್, ಮುತ್ತು ಎಲ್ಲರೂ 250P ಬಸ್ನಲ್ಲಿ ಮೆಜೆಸ್ಟಿಕ್ ಗೆ ಹೊರಟೆವು. ಪರಿ ಹರೀಶ್ ಮನೆಗೆ ಹೋಗಿ ಅವನನ್ನು ಕರೆತರಬೇಕಾಗಿತ್ತು. 250P  ಬಸ್ ಅಲ್ಲವೇ? ಹೇಗಿದ್ದರೂ ದೇವಯ್ಯ ಪಾರ್ಕ್ ಮುಖಾಂತರ ಹೋಗುತ್ತದೆ. ಹರೀಶನ ಮನೆ ಬಸ್ ಸ್ಟಾಪ್ ಗೆ ಬಹಳ ಸಮೀಪವಿದ್ದುದರಿಂದ ಅಲ್ಲಿಯೇ ಪರಿಯನ್ನು ಇಳಿಸಿದರಾಯಿತು ಎಂದು ನಾನು ಯೋಚಿಸಿದ್ದೆ. ಆದರೆ ಚಾಲಕ ಮಾರ್ಗ ಬದಲಿಸಿ ರಾಜ್ಕುಮಾರ್ ರಸ್ತೆಯಿಂದ ಟರ್ನ್ ತಗೊಂಡ. ಈ ಮಧ್ಯ ಪರಿ 'ಸುಜಾತ' ಹತ್ತಿರ ಇಳಿದ. (ಅಲ್ಲ ನಾನು ಹೇಳಿ ಇಳಿಸಿದೆ!). ನಾವೆಲ್ಲಾ ಬಸ್ ಸ್ಟ್ಯಾಂಡ್ ನಲ್ಲಿ ಕಾಯುತ್ತಿದ್ದೆವು. ಚಂದ್ರಣ್ಣ 'ಮೆಟ್ರೋ' ಲಗೇಜಿನ ಸಮೇತ ಬಂದಿಳಿದ. ಹರೀಶ್ ಮತ್ತು ಪರಿ ಇನ್ನೂ ಬಂದೇ ಇರಲಿಲ್ಲ, ನಮಗೆಲ್ಲ ಆತಂಕ ಶುರುವಾಗಿತ್ತು. ಪರಿ ಮಹಾರಾಷ್ಟ್ರದ ನಾಗಪುರದವನಾಗಿದ್ದು ಬೆಂಗಳೂರಿನ ಪರಿಚಯ ಅವನಿಗೆ ಅಷ್ಟಾಗಿ ಇರಲಿಲ್ಲ. ಸಾಲದ್ದಕ್ಕೆ  ಎಲ್ಲೋ ಇಳಿಯಬೇಕಾಗಿದ್ದವನು  ಇನ್ನೆಲ್ಲೋ ಇಳಿದಿದ್ದ.  ಸರಿ ಅವರು ಬಂದ ಮೇಲೆ ಪರಿಯಿಂದ ನನಗೆ  ಮಂಗಳಾರತಿ ಆಯ್ತು. ಯಾಕೆಂದು ಬೇರೆ ತಿಳಿಸಬೇಕಿಲ್ಲ ಅಲ್ವಾ? ಎಲ್ಲವೂ ಸರಿಯಾಯ್ತು ಅನ್ನುವಷ್ಟರಲ್ಲಿ  ರಶ್ಮಿಯ ಕರಿಬ್ಯಾಗ್ ಕಿತ್ತ್ಕೊಂಡು ಹೋಯ್ತು. ಅದಕ್ಕೆ ಕಾರಣರಾದ ಮಹಾನುಭಾವರಿಗೆ ಹಿಡಿಶಾಪ ಹಾಕುತ್ತ ಹೊಸ ಬ್ಯಾಗ್ ಖರೀದಿಗೆಂದು ಹೊರಟರು. ನೂರಾಎಪ್ಪತ್ತು ರೂಪಾಯಿ ದಂಡ ತೆತ್ತು ಹೊಸ ಹಸಿರು ಬ್ಯಾಗ್ ತಂದೇಬಿಟ್ಟರು. ಹೊರಡುವ ಮೊದಲೇ ಇಷ್ಟೆಲ್ಲಾ ಅವಾಂತರಗಳು, ಮುಂದೇನೋ ಎಂದುಕೊಂಡೇ ಬಸ್ ಗಾಗಿ ಕಾಯುತ್ತಿದ್ದೆವು. ನಮ್ಮ ಬಸ್ ನಂಬರ್ ಅನ್ನು ಖಚಿತಪಡಿಸಿಕೊಂಡು ಬರಲು ಹರೀಶ್ ಹೋಗಿದ್ದ, ಬಂದವನೇ ತಡಬಡಾಯಿಸುತ್ತ 'ಎಂಬತ್ಮೂರು ಎಪ್ಪತ್ನಾಲ್ಕು' ಅಂದರೆ ಎಷ್ಟು ಎಂದ. ಕಾರಣ ಕೇಳಿದ್ದಕ್ಕೆ ಅದೇ ನಮ್ಮ ಬಸ್ ನಂ. ಎಂದು ಗೊತ್ತಾಯಿತು. ಕನ್ನಡದಲ್ಲಿ  ಹೇಳಿದ ಸಂಖ್ಯೆಯನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳಿದಾಗಲೇ ಅವನಿಗೆ ಅರ್ಥವಾಗಿದ್ದು. ತಿಳಿಹಾಸ್ಯಕ್ಕೆ ಕಾರಣವಾಗಿದ್ದ ಈ ಪ್ರಸಂಗ ನಿಜಕ್ಕೂ ವಿಷಾದಕರವೇ. ಅಯ್ಯೋ ಕನ್ನಡವೇ... ಎಂದುಕೊಳ್ಳುತ್ತಿರುವಾಗ ನಮ್ಮ 8374 ನಂ. ಬಸ್ ಬಂದೇ ಬಿಟ್ಟಿತು. ನಮಗಾಗಿ ಕಾಯ್ದಿರಿಸಿದ್ದ ಆಸನಗಳನ್ನು ನಾವೂ ಅಲಂಕರಿಸಿಬಿಟ್ಟೆವು.  ಮುತ್ತು ಹೊತ್ತು ತರುತ್ತಿದ್ದ ಚೀಲವನ್ನು ನೋಡಿ ಕಂಡಕ್ಟರ್ ಅವನನ್ನು ಕೂಲಿಆಳೆಂದು ಕರೆದಾಗ ನಮಗೆಲ್ಲ ಹೊಟ್ಟೆ ಬಿರಿಯುವಷ್ಟು ನಗು. ಕಂಡಕ್ಟರ್ ಜೊತೆಗಿನ ಮಾತುಕತೆಯಲ್ಲಿ ದೋಣಿಗಲ್ ಗೆ  ಇರುವ ಮಾರ್ಗವನ್ನು ದುರಸ್ತಿಗಾಗಿ ನಿಲ್ಲಿಸಿದ್ದಾರೆಂದು ಗೊತ್ತಾಯಿತು. ಸಕಲೇಶಪುರದಿಂದ  ಬೇರೆ ವಾಹನಗಳು ಸಿಗುತ್ತವೆಂದು ತಿಳಿದು ಸ್ವಲ್ಪ ಸಮಾಧಾನವಾಯಿತು. ಅದೂ ಇದೂ ಮಾತಾಡುತ್ತ ಹಾಗೆಯೇ ನಿದ್ರೆಹೋದೆವು.

 

15 /10 /07 - ಸೋಮವಾರ

ಬೆಳ್ಳಂಬೆಳಿಗ್ಗೆ ನಾಲ್ಕುವರೆಗೆ ಸಕಲೇಶಪುರದಲ್ಲಿ ತನ್ನ ಒಡಲಿನಿಂದ ನಮ್ಮೆಲ್ಲರನ್ನೂ ಹೊರಹಾಕಿತು ನಂ.8374 ರ ಬಸ್. ಕಣ್ಣುಜ್ಜುತ್ತಾ ಆಚೀಚೆ ನೋಡುತ್ತಿರುವಾಗ ಹರೀಶ ಕಾಲೇಜಿನ ಉಪನ್ಯಾಸಕರಿಗಷ್ಟೇ ಅಲ್ಲದೆ ಬಸ್ ನ ಚಾಲಕನಿಗೂ 'ಬಕೆಟ್' ಹಿಡಿಯುತ್ತಿದ್ದುದನ್ನು ನೋಡಿ ನಗು ತಡೆಯಲಾಗಲಿಲ್ಲ. ಬಸ್ ನಿಲ್ದಾಣದಲ್ಲಿ ಎಲ್ಲರೂ ಟೀ ಕುಡಿದು ದೋಣಿಗಲ್ ಬಸ್ ಗಾಗಿ ಕಾಯುತ್ತಿದ್ದೆವು. ಅಲ್ಲಿಯ ವಾತಾವರಣ ಎಲ್ಲರಿಗೂ ಇಷ್ಟವಾಯಿತು. ಕ್ಯಾಮರಾಕ್ಕಂತೂ ಬಿಡುವೇ ಇರಲಿಲ್ಲ. 6.45 ಕ್ಕೆ  ಮಂಗಳೂರಿಗೆ ಹೋಗುವ ಬಸ್ ದೋಣಿಗಲ್ ಮಾರ್ಗವಾಗಿ ಹೋಗುವುದೆಂದು ಗೊತ್ತಾಯಿತು. ಪ್ರಾತಃಕಾಲದ ಕರ್ಮಗಳನ್ನೆಲ್ಲ ಮುಗಿಸಿಕೊಳ್ಳುವ ಹೊತ್ತಿಗೆ ಮಂಗಳೂರಿನ ಬಸ್ ಬಂತು. ದೋಣಿಗಲ್ ಗೆ ಸರಿಯಾದ ಮಾರ್ಗವಿರದ ಕಾರಣ ಅದಕ್ಕೆ ಸಮೀಪವಾಗುವ ಸ್ಥಳದಲ್ಲಿ ಚಾಲಕ ನಮ್ಮನ್ನಿಳಿಸಿದರು. ಸ್ಥಳೀಯರ ಸಲಹೆಯಂತೆ ಎಸ್ಟೇಟ್ ಅನ್ನು ಬಳಸಿಕೊಂಡು ರೈಲ್ವೆ ಟ್ರ್ಯಾಕ್ ತಲುಪಲು ದೌಡಾಯಿಸಿದೆವು. ಟ್ರ್ಯಾಕ್ ಸಿಕ್ಕ ತಕ್ಷಣ ಎಲ್ಲರೂ ಅಕ್ಷರಶಃ  ನೆಗೆದಾಡಿಬಿಟ್ಟೆವು. ನಮ್ಮ ಚಾರಣ ಶುರುವಾಗಿದ್ದೇ ಇಲ್ಲಿಂದ. ಹಳದಿ ಬೋರ್ಡಿನಲ್ಲಿ  (46 /600 ) ಎಂದು ನಮೂದಿಸಲಾಗಿತ್ತು. ಮೆಟ್ರೋ ಚೀಲ ಸಖತ್ ಭಾರವಾಗಿದ್ದುದರಿಂದ ಎಲ್ಲರಿಗೂ ಅದರಲ್ಲಿದ್ದ ವಸ್ತುಗಳನ್ನು ಹಂಚಲಾಯಿತು. ನಮ್ಮ ಬ್ಯಾಗುಗಳ ಹೊಟ್ಟೆಯಲ್ಲಿ ಮತ್ತೊಂದಿಷ್ಟು ಸಾಮಾನು ತುರುಕಿಸಿಕೊಂಡು ಹೊರಟೆವು. ಉತ್ಸಾಹ ಬಹಳ ಇದ್ದುದರಿಂದ ಲಗೇಜು ಭಾರ ಎನಿಸಲಿಲ್ಲ. ಮೊದಲ ಬಾರಿಗೆ ಬ್ರಿಡ್ಜ್ ಬಂದಾಗ ಥ್ರಿಲ್ ಆದೆವು. ನಾನು ರಶ್ಮಿ ಮೊದಲು ಬ್ರಿಡ್ಜ್ ಕ್ರಾಸ್ ಮಾಡಲು ಶುರುಮಾಡಿದೆವು. ಮಧ್ಯದಲ್ಲಿ ರಶ್ಮಿಗೆ ಭಯವಾಯಿತಾದರೂ ನಾನು ಅವಳು ಧೈರ್ಯ ಮಾಡಿ ಇನ್ನೊಂದು ತುದಿ ತಲುಪಿದೆವು. ಕೆಳಗೆ ನದಿ ಹರಿಯುತ್ತಿತ್ತು. ತಿಂಡಿ ತಿನ್ನಲು ಅದೇ ಪ್ರಶಸ್ತ ಸ್ಥಳವಾಗಿತ್ತು.   ಕಾಲುದಾರಿಯ ಸಹಾಯದಿಂದ ಕೆಳಗೆ ಹರಿಯುತ್ತಿದ್ದ ನೀರನ್ನು ತಲುಪಿದೆವು. ಆಟವಾಡುತ್ತ ತಿಂಡಿ(ಬ್ರೆಡ್) ತಿಂದೆವು. ಹೀಗೇ ನೀರಿನಲ್ಲಿ ಕಪಿಚೇಷ್ಟೆ ಮಾಡಿದ ಹರೀಶ ವಿಭಾಳ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ, ಪಾರ್ವತಿಯು ಶಿವನಿಂದ ಮುನಿಸಿಕೊಂಡು ತಪಸ್ಸಿಗೆ ಹೊರಟಂತೆ  ಇದ್ದಕ್ಕಿದ್ದಂತೆ ವಿಭಾ ಕಣ್ಮರೆಯಾಗಿಬಿಟ್ಟಳು. ಅವಳನ್ನು ಹುಡುಕುವುದೇ ದೊಡ್ಡ ರಂಪವಾಗುತ್ತದಲ್ಲ ಎಂದು ನಾವಂದುಕೊಳ್ಳುತ್ತಿರುವಾಗಲೇ ಹರೀಶ ಬಂದು " ಏ, ಹೋಗ್ರೆ ಹುಡುಕ್ರೀ ಎಲ್ ಹೋದ್ಲು ಅಂತ"  ನಮಗೆ ಈ ಹುಡುಕುವ ಕೆಲಸವನ್ನು ಹೇಳಿದ (ಕೈಲಾಗದವನಂತೆ!).  ನೀನೆ ಹುಡುಕು ಎಂದು ಧಮಕಿ ಹಾಕಿದ್ದಕ್ಕೆ ಅವನು ಕೊಟ್ಟ 'ಶೂ' ಕಾರಣವಂತೂ ತುಂಬಾ ಸಿಲ್ಲಿಯಾಗಿತ್ತು. ಬಹಳ ಸಿಟ್ಟಿನಿಂದ ನಾನು ರಶ್ಮಿ, ಚಂದ್ರಿಕಾ ಎಲ್ಲರೂ ಅವಳನ್ನು ಹುಡುಕಲು ಮತ್ತೆ ಗುಡ್ಡ ಹತ್ತಿದೆವು. ಒಂದರ್ಧ ಗಂಟೆ ಇದರಲ್ಲೇ ಕಳೆಯಿತು. ಕೊನೆಗೂ ವಿಭಾಳ ದರ್ಶನವಾಗಿ  ಎಲ್ಲರೂ ಬೈದು (ಮುಖಕ್ಕೆ ಉಗಿದು?) ಟ್ರ್ಯಾಕ್ ಗೆ ಕರೆದುಕೊಂಡು ಬರುವಷ್ಟರಲ್ಲಿ ಸಾಕಾಯಿತು. ಆದಷ್ಟು ಬೇಗ ಹೊರಡಬೇಕೆನ್ನುವ ಆತುರವಿದ್ದರೂ ಎಲ್ಲರ ಸಹಕಾರವಿಲ್ಲದೆ ನಮ್ಮ ಚಾರಣ ಕುಂಟುತ್ತಾ ಸಾಗಿತು. ಹರೀಶ್-ವಿಭಾ ನಮ್ಮ ಬಾಯಿಗೆ ಆಹಾರವಾಗಿದ್ದರು. ನಾನಂತೂ ವಿಭಾಳ ಡೈಲಾಗ್  'ಏ, ಗಂದೆ ರುಕ್ ನಾ..' ಎಂದು ಪದೇ ಪದೇ ಹೇಳಿ ಅವಳ ತಲೆ ತಿನ್ನುತ್ತಿದ್ದೆ. ಮಧ್ಯಾಹ್ನ ನೀರು ಇರುವ ಜಾಗ ಎಲ್ಲೂ ಸಿಗದೇ ನಾವು ಸಂಜೆಯಾದರೂ ನಡೆಯುತ್ತಲೇ ಇರಬೇಕಾಯಿತು. ಮಾರ್ಗ ಮಧ್ಯೆ ಹಣ್ಣು ತಿನ್ನುತ್ತ ಬಂದುದರಿಂದ ಬಚಾವಾದೆವು. ಚಂದ್ರಿಕಾ ಅಂತೂ ಹಸಿವಿನಿಂದ ಬಾಯಿ ಒಣಗಿಸಿಕೊಂಡು  "ಹಸಿವಾಗ್ಲಿಕತದ" ಎಂದು ಪದೇ ಪದೇ ಹೇಳುವಾಗ ನಾವೆಲ್ಲ ಸೇರಿಕೊಂಡು ಅವಳ ಕಾಲೆಳೆಯುತ್ತಿದ್ದೆವು.  ಹಾಗೆಯೆ ಅವರಿವರನ್ನು ಲೇವಡಿ ಮಾಡುತ್ತ ಸಾಗುತ್ತಿದ್ದಂತೆ ಸ್ವಲ್ಪ ದೂರದಲ್ಲಿ ಒಂದಿಬ್ಬರು ಟ್ರ್ಯಾಕ್ ರಿಪೇರಿ ಮಾಡುತ್ತಿದ್ದರು. ಅವರು ಹೇಳಿದ ಪ್ರಕಾರ ಅಲ್ಲೇ ಕೆಳಗೆ ನೀರಿದ್ದ ಜಾಗಕ್ಕೆ ನಮ್ಮ ಗುಂಪು(ಗಾಂಪರ?) ಬಂದಿಳಿಯಿತು. ಸಂಜೆ ಸುಮಾರು ನಾಲ್ಕೂವರೆಗೆ ಚಂದ್ರಿಕಾ ಉಪ್ಪಿಟ್ಟು ಹಾಗು ಚಹಾ ತಯಾರಿಸಿದಳು. ತರಕಾರಿ ಹೆಚ್ಚಿಕೊಟ್ಟಿದ್ದೆಲ್ಲ ಚಂದ್ರಣ್ಣ(ವೆಂಕಟೇಶ್) ಬಿಡಿ... ಅಡುಗೆ ಮನೆಯ ಸೆಕ್ಷನ್ ಅನ್ನು ಚಂದ್ರಿಕಳ ಸುಪರ್ದಿಗೆ ಬಿಟ್ಟು ಕೊಟ್ಟೆವು.  ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾಗ ಮಣಿ ಎನ್ನುವವರ ಪರಿಚಯವಾಯಿತು. ನಾವು ಚಾರಣಕ್ಕೆ ಬಂದಿರುವುದೆಂದು ತಿಳಿದು ಈ ರಾತ್ರಿ ಅವರ ಮನೆಯಲ್ಲಿ ಉಳಿಯಲು ನಮಗೆ ಆಹ್ವಾನ ಕೊಟ್ಟರು. ಮುತ್ತು ಹೋಗಿ ಅವರ ಮನೆ ನೋಡಿಕೊಂಡು ಬಂದ. ನಾವು ಟೆಂಟ್ ಹಾಕಿಕೊಂಡು ಇರುವುದೆಂದು ತೀರ್ಮಾನಿಸಿದ್ದರೂ ಸುರಕ್ಷತೆಯ ದೃಷ್ಟಿಯಿಂದ ನಮ್ಮ ತೀರ್ಮಾನವನ್ನು ಬದಲಿಸಿದೆವು.  ರಾತ್ರಿ ಅಶ್ವಿನ್ ಮತ್ತು ಚಂದ್ರಿಕಾ ಪಲಾವ್ ತಯಾರಿಸಿದರು. ಊಟವಾದ ನಂತರ ಮನೆಯ ಹೊರಗಡೆ ಕ್ಯಾಂಪ್ ಫೈರ್ ಹಾಕಿ ಸುಟ್ಟ ಮುಸುಕಿನ ಜೋಳವನ್ನು ತಿನ್ನುತ್ತ ಬೆಂಕಿ ಕಾಯಿಸಿಕೊಂಡೆವು.

16/10/07  -  ಮಂಗಳವಾರ    

ನನಗೆ ಬೆಳಿಗ್ಗೆ ಬೇಗ ಎಚ್ಚರವಾಯಿತು ಸರಿ ಬೇಗ ಸ್ನಾನ ಮಾಡಿ ರೆಡಿ ಆಗುವುದೆಂದು ಹೊರಗೆಬಂದೆ. ನೀರು ಬಹಳ ತಣ್ಣಗಿತ್ತು. ಹಂಡೆ ಒಲೆಗೆ ಬೆಂಕಿ ಹಾಕಿ ನೀರು ಕಾಯಿಸಿ ಕೊಳ್ಳುವಷ್ಟರಲ್ಲಿ ರಶ್ಮಿ ಬಂದಳು. ನಾವು ಬೇಗ ಸ್ನಾನ ಮುಗಿಸಿ ಬೇರೆಯವರಿಗೂ ಅನುಕೂಲವಾಗಲೆಂದು ಬೆಂಕಿ ಹಾಕಿದೆವು. ಚಂದ್ರಿಕಾ ಸ್ನಾನಕ್ಕೆ ಹೋಗಿ ಮುಕ್ಕಾಲು ಗಂಟೆಯಾದರೂ ಬರದಿದ್ದಾಗ ನೆಕ್ಸ್ಟ್ ಕ್ಯು ನಲ್ಲಿ ನಿಂತಿದ್ದ ಹರಿಶನಂತೂ ಕೆಂಡಾಮಂಡಲನಾಗಿದ್ದ. ಇದ್ಯಾವುದನ್ನೂ ಲೆಕ್ಕಿಸದೆ ನಾನು ಮತ್ತು ರಶ್ಮಿ ಕುಂಟಬಿಲ್ಲೆ ಆಡಲು ಆ ಮನೆಯ ಪುಟ್ಟ ಹುಡುಗಿಗೆ 'ಬಚ್ಚಾ' ತರಲು ಹೇಳಿದೆವು. ನಮ್ಮ ನಮ್ಮ ಬಚ್ಚಾ ಆರಿಸಿಕೊಂಡು ಆಟ ಆಡಿದೆವು.  ಮನೆಯ ಸುತ್ತಮುತ್ತ ಚೆನ್ನಾಗಿ ಓಡಾಡಿದೆವು. ಬೆಳಗಿನ ಉಪಹಾರಕ್ಕಾಗಿ ನೂಡಲ್ಸ್ ಮಾಡಿದ್ದರು. ಪಾಪ ಅಶ್ವಿನ್ ಉಪವಾಸವಿದ್ದುದರಿಂದ ಏನನ್ನು ತಿನ್ನಲೇ ಇಲ್ಲ ಒಂದು ಲೀಟರ್ ಹಾಲು ಮಾತ್ರ ಕುಡಿದ!  ನಾವೆಲ್ಲಾ ಸಿದ್ಧವಾಗುವ ಹೊತ್ತಿಗೆ ಮಧ್ಯಾಹ್ನ  12 .30 ಆಗಿತ್ತು. ಸರಿ ಎಲ್ಲರೂ ಗೊಣಗುತ್ತಾ ಮತ್ತೆ ಟ್ರ್ಯಾಕ್ ಗೆ ಬಂದೆವು. 54 /400 ರಿಂದ ನಮ್ಮ ಮುಂದಿನ ಪಯಣ ಶುರುವಾಯಿತು. ಮುಂದೆ ಕಡಗರವಳ್ಳಿಯ ಸ್ಟೇಷನ್ ನಲ್ಲಿ ಉಳಿದುಕೊಳ್ಳುವುದೆಂದು  ನಿರ್ಧರಿಸಿದೆವು. ನಡೆಯುತ್ತಾ ಹೋದಂತೆ ಯಾಕೋ ಲಗೇಜು ತುಂಬಾ ಭಾರವೆನಿಸುತ್ತಿತ್ತು. ಅಲ್ಲಲ್ಲಿ ವಿರಮಿಸಿಕೊಳ್ಳುತ್ತಾ ಸಾಗಿದೆವು.  ಮೊದಲ ಸುರಂಗ ಸಿಕ್ಕಾಗ ನಿಧಿಸಿಕ್ಕಷ್ಟೇ ಸಂತೋಷದಿಂದ ಕಿರುಚಿಬಿಟ್ಟೆವು. ನಂತರ ಬರೀ ಬ್ರಿಡ್ಜ್ ಮತ್ತು ಟನಲ್ ಗಳನ್ನೂ ನೋಡಿ ನೋಡಿ ಅಭ್ಯಾಸವಾಯಿತು.. ಸುರಂಗದ ಗೋಡೆಯ ಮೇಲೆ ಚಾಕ್ ಪೀಸ್ ನಿಂದ ನಮ್ಮ ಹೆಸರುಗಳನ್ನು ಬರೆದು ಬರೆದು ಬಹಳ ಸಂಭ್ರಮಪಟ್ಟೆವು. CCD ಎನ್ನುವ ಕೋಡ್ ಉಪಯೋಗಿಸಿ ಪರಸ್ಪರ ಹಾಸ್ಯ ಮಾಡುತ್ತಿದ್ದೆವು. ಅಲ್ಲಿನ ಪ್ರಾಕೃತಿಕ ಸೌಂದರ್ಯವಂತೂ ಬಣ್ಣಿಸಲು ಸಾಧ್ಯವೇ ಇಲ್ಲ. ಬೆಟ್ಟಗಳಂತೂ ಹಸಿರು ಮಕಮಲ್ ಬಟ್ಟೆಯನ್ನು ಹೊದ್ದು ಕುಳಿತಂತೆ ಕಾಣುತ್ತಿದ್ದವು. ಅಲ್ಲಿನ ವಾತಾವರಣ ಬೇಂದ್ರೆ ಕಾವ್ಯದಲ್ಲಿನ ಶ್ರಾವಣವನ್ನು ನೆನಪಿಸುತ್ತಿದ್ದವು. ಕಂಡ ಕಂಡಲ್ಲಿ ಫೋಟೋ ತೆಗೆಯುತ್ತಿದ್ದ ಅಶ್ವಿನ್ ನಲ್ಲಿ ಉದಯೋನ್ಮುಖ ಕ್ಯಾಮರಾಮನ್ ಆಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳು ಕಾಣುತ್ತಿದ್ದವು. ಇದೆಲ್ಲದರ ಮಧ್ಯ ಪರಿತೊಷ ನ  ಹರಿದ ಪ್ಯಾಂಟು ಉಚಿತ ಮನರಂಜನೆಗೆ ಕಾರಣವಾಗಿತ್ತು. ಈ ಹಳಿಯ ಮೇಲೆ 1975 ರಲ್ಲಿ ನಿರ್ಮಿತವಾದ ಹನ್ನೊಂದನೇ ಟನಲ್ 583 ಮೀ ಉದ್ದವಿದ್ದು ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ಅತಿ ಉದ್ದದ ಟನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಆಮೇಲೆ ಸಿಕ್ಕ ವಕ್ರ ವಕ್ರವಾಗಿದ್ದ ರಾಮಸ್ವಾಮಿ ಸೇತುವೆ ನಮ್ಮೆಲ್ಲರಿಗೂ ಬಹಳ ಇಷ್ಟವಾಯಿತು. ಚಂದ್ರಣ್ಣನ ಚಾರ್ಜ್ ಬ್ಯಾಟರಿಯ ಸಹಾಯದಿಂದ ನಿರಾಯಾಸವಾಗಿ ಟನಲ್ ಗಳನ್ನು ಕ್ರಾಸ್ ಮಾಡುತ್ತಿದ್ದೆವು. ಕಡಗರವಳ್ಳಿಯ ಸ್ಟೇಶನ್  ತಲುಪಿದಾಗ ಕೇವಲ 3 .30  ಮಾತ್ರ ಆಗಿತ್ತು. ಅಲ್ಲಿ ಉಳಿದು ಬಸ್ ಮುಖಾಂತರ ಸುಬ್ರಹ್ಮಣ್ಯಕ್ಕೆ ಹೋಗುವುದೆಂದೂ, ಯಡಕುಮರಿ ಕ್ಯಾನ್ಸಲ್ ಮಾಡುವುದೆಂದೂ ಒಮ್ಮತಕ್ಕೆ ಬರಲಾಯಿತು. ಇದರಿಂದ ನನಗೆ ನಿರಾಸೆ ಆಯಿತಾದರೂ ಎಲ್ಲರು ಹೇಳಿದಂತೆ ಕೇಳಲೇಬೇಕಲ್ಲವೇ? ಮತ್ತೆ ಮನಸು ಬದಲಿಸಿದ ಪರಿ ಇಂದೇ ಯಡಕುಮರಿಗೆ ಹೋಗುವುದೆಂದೂ ಕಡಗರವಳ್ಳಿಯಲ್ಲಿ ಉಳಿಯುವುದು ಬೇಡವೆಂದೂ ತಿಳಿಹೇಳಿದ. ಅವನ ಮಾತಿನಂತೆ ನಾವು ಸರಸರನೆ ಹೆಜ್ಜೆ ಹಾಕಲು ಶುರು ಮಾಡಿದೆವು. ನಾವು ಎಷ್ಟೇ ದೂರ ನಡೆದರೂ ಯಡಕುಮರಿಯ ಸ್ಟೇಷನ್ ಸಿಗಲೇ ಇಲ್ಲ. ಸೂರ್ಯ ದೂರದ ಗುಡ್ಡದಲ್ಲಿ ಲೀನವಾಗುತ್ತಿದ್ದಂತೆ ಎಲ್ಲಿ ಕತ್ತಲಾಗಿಬಿಡುತ್ತದೋ ಎಂಬ ದಿಗಿಲು ಎಲ್ಲರಿಗಿತ್ತು. ಜೊತೆಗೆ ಮಳೆ ಬರುವ ಹಾಗೆ ಮೋಡಕವಿದ ವಾತಾವರಣವಿತ್ತು. ನನಗಂತೂ ಸ್ಟೇಷನ್ ಯಾವಾಗ ಸಿಗುವುದೋ ಎಂಬಂತಾಗಿತ್ತು. ಸುಬ್ರಹ್ಮಣ್ಯನಿಗೆ ಹರಕೆ ಕಟ್ಟಿಕೊಂಡು ಧೈರ್ಯವಾಗಿ ಹೊರಟೆವು. ಸಿಗ್ನಲ್ ಲೈಟ್ಸ್ ಕಂಡ ತಕ್ಷಣ ತುಸು ಸಮಾಧಾನವಾಯಿತು. ಮತ್ತೆ ಸುಮಾರು ಒಂದು ಕಿ.ಮೀ. ನಡೆಯುವ ಹೊತ್ತಿಗೆ ಟ್ಯೂಬ್ ಲೈಟ್ ಬೆಳಕು ಕಾಣಿಸಿತು. ಪ್ಲಾಟ್ ಫಾರಂ ನೋಡುತ್ತಿದ್ದಂತೆ ಕಣ್ಣಾಲಿಗಳು ತುಂಬಿಕೊಂಡವು. ದೇವರಿಗೆ ಮನದಲ್ಲೇ ಧನ್ಯವಾದ ಅರ್ಪಿಸಿ ಮೇಲೆ ಹತ್ತಿದೆವು. 67/300 ರಲ್ಲಿ ನಮಗೆ ಯಡಕುಮರಿ ಸಿಕ್ಕಿತ್ತು. ಸ್ಟೇಷನ್ ಮಾಸ್ಟರ್ ಮುಂಗೊಪಿಯಾಗಿದ್ದರಿಂದ ನಾವು ಅವನಿಂದ ಉಗಿಸಿಕೊಳ್ಳದೆ ಬೇರೆ ವಿಧಿಯಿರಲಿಲ್ಲ. ನಾವು ಏನೂ ಎದುರು ಮಾತಾಡದೆ ಪ್ಲಾಟ್ ಫಾರಂ ಮೇಲೆ ಸುಧಾರಿಸಿಕೊಳ್ಳುತ್ತಿರುವಾಗ ಬಿಹಾರ್ ಮೂಲದ ಯುವಕರು ನಮಗೆ ಇರಲು ಸ್ಥಳ ತೋರಿಸಿದರು. ಅಲ್ಲಿ ಸೂಪ್ ಹಾಗು ಪಲಾವ್ ತಯಾರಿಸಿ ತಿಂದೆವು. ರಾತ್ರಿ  ಸರದಿ ಪ್ರಕಾರ ಕಾವಲು ಇರುವುದೆಂದೂ, ನಾನು ಚಂದ್ರಣ್ಣ ಹಾಗು ಮುತ್ತು ಮೊದಲು ಡ್ಯೂಟಿ ಶುರು ಮಾಡಿದೆವು. 3.30 ಕ್ಕೆ ವಿಭಾ ಹರೀಶ್ ರನ್ನು ಎದ್ದೇಳಿಸುವುದೆಂದು ಅಂದುಕೊಂಡೆ. ಸಮಯ ಕಳೆಯಲು ಮುತ್ತು ಮಿಲನ ಚಿತ್ರದ ಕಥೆ ಹೇಳಿ ನಮ್ಮ 60 ರೂ ಉಳಿಸಿದ. ಚಂದ್ರಣ್ಣ ನಂತೂ ತಲೆಕೆಟ್ಟು ಮಲ್ಕೊಂಡು ಬಿಟ್ಟ. ಟೈಮ್ ನೋಡಿದಾಗ ಆಗಲೇ ನಾಲ್ಕಾಗಿತ್ತು. ಮುಂದಿನ ಪಾಳಿಯ ವಿಭಾ ಹರೀಶ ರಿಗೆ ಕೆಲಸ ಒಪ್ಪಿಸಿ ನಾವು ಮಲಗಿದೆವು.

17 /10 /07  - ಬುಧವಾರ

ಬೆಳಿಗ್ಗೆ ಕಣ್ಣು ಬಿಟ್ಟಾಗ 7.30 ಆಗಿತ್ತು. ಅಷ್ಟರಲ್ಲಾಗಲೇ ಚಂದ್ರಿಕಾ ಮತ್ತು ಅಶ್ವಿನ್ ಒಂದು ರೌಂಡ್ ಫೋಟೋ ಸೆಶನ್ ಮುಗಿಸಿದ್ದರು. ಗೂಡ್ಸ್ ಗಾಡಿಯಲ್ಲಿ ಹತ್ತು ಗಂಟೆಗೆ ಸುಬ್ರಹ್ಮಣ್ಯಕ್ಕೆ ಹೋಗುವುದೆಂದು ನಿಶ್ಚಯವಾಯಿತು. ಗೂಡ್ಸ್ ಗಾಡಿಯವರು ನಮ್ಮನ್ನು ಹತ್ತಿರಕ್ಕೂ ಸೇರಿಸಲಿಲ್ಲ. ಇಷ್ಟರಲ್ಲಿ ಡೌನ್ಲೋಡ್ ಮಾಡಲು ಸೂಕ್ತ ಸ್ಥಳ ಸಿಗದೇ ರಶ್ಮಿ ಪರದಾಡಿದ್ದಂತೂ ನಗು ಬರುವಂತಿತ್ತು. ಸ್ವಲ್ಪ ಸಮಯದ ನಂತರ ನಮ್ಮೆಲ್ಲರದೂ ಅದೇ ಗತಿಯಾಯಿತಾದರೂ ವಿಧಿಯಿಲ್ಲದೇ ಹಾಗೆ ಹೋಗುವುದೆಂದುಕೊಂಡೆವು. ಅಲ್ಲಿ ಇದ್ದವರ ಸಲಹೆಯಂತೆ ನಾವು ವಾಪಸ್ ಸಕಲೇಶಪುರಕ್ಕೆ ಹೋಗುವುದೋ ಅಥವಾ ಸುಬ್ರಹ್ಮಣ್ಯಕ್ಕೆ ಹೋಗುವುದೋ ಎಂಬ ದ್ವಂದ್ವದಲ್ಲಿ ಬಿದ್ದೆವು. ಹೊಂಗರಹಳ್ಳಿಯ ದಾರಿಯನ್ನು ಹೇಳಿದರಾದರೂ ಅದು ಅವರಿಗೆ ಪರಿಚಿತವಿಲ್ಲ ಎಂದರು. ನಾವು ಹೋದರೆ ಹೊಂಗರಹಳ್ಳಿಯಿಂದ ಸಕಲೇಶಪುರಕ್ಕೆ ಮಾತ್ರ ಬಸ್ ಸಿಗುತ್ತದೆ ಆದರೆ ಸುಬ್ರಹ್ಮಣ್ಯಕ್ಕೆ ಬಸ್ ವ್ಯವಸ್ಥೆ ಇಲ್ಲ ಎಂದರು. ಅದೂ ಅಲ್ಲದೆ ಹೊಂಗರಹಳ್ಳಿಯ ದಾರಿ ಕಾಡಿನ ಮಧ್ಯೆ ಹಾದು ಹೋಗುವುದರಿಂದ ಅಷ್ಟು ಸುರಕ್ಷಿತವಲ್ಲ ಎಂದು ನಾವೇ ತೀರ್ಮಾನಿಸಿದೆವು. 80/200 ರಲ್ಲಿ  ಬಲಕ್ಕೆ ತಿರುಗಿದರೆ ಕಾಲುದಾರಿ ಇದೆ ಅಲ್ಲಿ ನಾಲ್ಕು ಕಿ.ಮೀ. ನಡೆದು ಗುಂಡ್ಯಕ್ಕೆ ಹೋದರೆ ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಬಸ್ ಸೌಕರ್ಯವಿದೆ  ಎಂದರು.  ಸರಿ ಮತ್ತದೇ ನೂಡಲ್ಸ್ ತಿಂದು ಹೊರಡಬೇಕೆನ್ನುವಷ್ಟರಲ್ಲಿ ಪರಿ 'ಪಟಾಕ ಫೋಡಿ'ದ್ದರಿಂದ ಅಲ್ಲೊಂದು ಹಾಸ್ಯ ಸೃಷ್ಟಿಯಾಯಿತು. ನಾವೆಲ್ಲಾ ಮತ್ತೆ ಅದೇ ಸ್ಪೂರ್ತಿಯಿಂದ ಹೆಜ್ಜೆ ಹಾಕಿದೆವು. ಸುರಂಗದಲ್ಲಿ ಬರುತ್ತಿದ್ದ ಬಾವಲಿಗಳ ಕೆಟ್ಟ ವಾಸನೆಗೆ ನಮ್ಮ ಮೂಗು ಒಗ್ಗಿಹೋಗಿತ್ತು. ಸಾಲದ್ದಕ್ಕೆ ಜಿಗಣೆಗಳ ಕಾಟ. ಕಾಲು ಕಾಲಿಗೆ ತೊಡರಿ ಕೊಳ್ಳುತ್ತಿದ್ದ ಒಂದೆಲಗದ ಬಳ್ಳಿಯಿಂದ ರೋಸಿ ಹೋಗಿದ್ದೆವು. ಸ್ವಲ್ಪ ಸಮಯದಲ್ಲಿ ಟ್ರಾಲಿಯೊಂದು ಅದೇ ಮಾರ್ಗವಾಗಿ ಬಂತು. ಅವರು ನಮ್ಮನ್ನು ಕಂಡೊಡನೆ ನಿಲ್ಲಿಸಿ ನಮಗೂ ಅದರಲ್ಲಿ ಸ್ಥಳಾವಕಾಶ ಮಾಡಿ ಕೊಟ್ಟರು. ರಶ್ಮಿಯ 'ಟ್ರಾಲಿ ಸವಾರಿಯ' ಕನಸು ಇದೀಗ ನನಸಾಗಿತ್ತು. ಟ್ರಾಲಿಯಲ್ಲಿ ಎಂಟು ಕಿ.ಮೀ ಸವಾರಿ ಮಾಡಿದೆವು. 80 /200 ರಲ್ಲಿ ನಮ್ಮನ್ನಿಳಿಸಿದ ಟ್ರಾಲಿ ಭರ್ ಎಂದು ಸಾಗಿತು. ಸಿರಿಬಾಗಿಲಿಗೆ ಹೋಗುತ್ತಿದ್ದ ಒಬ್ಬ ತಾತನನ್ನು ಗುಂಡ್ಯದ ದಾರಿಯ ಬಗ್ಗೆ ಕೇಳಿದಾಗ ಅವರು ಅದಕ್ಕಿಂತಲೂ ಸಮೀಪದ ದಾರಿ ತೋರಿಸುವೆನೆಂದು ನಮ್ಮನ್ನು ಕರೆದೊಯ್ದರು. ನನ್ನ ಬ್ಯಾಗ್ ಹರಿದು ನನಗಂತೂ ಅದನ್ನು ಹಿಡಿದುಕೊಂಡು ಬರುವುದೇ ಹರಸಾಹಸವಾಯಿತು. 83 /100 ರಲ್ಲಿ ಒಂದು ದೊಡ್ಡ ಬ್ರಿಡ್ಜ್ ಇತ್ತು ಆದರೆ ನಮಗೆ ಅಲ್ಲೇ ಎಡಕ್ಕೆ ತಿರುವು ತೆಗೆದುಕೊಳ್ಳ ಬೇಕಿದ್ದುದರಿಂದ ಆ ಬ್ರಿಡ್ಜ್ ಕ್ರಾಸ್ ಮಾಡುವ ಅವಕಾಶ ಸಿಗಲಿಲ್ಲ. ನಾವು ಚಾರಣದಲ್ಲಿ ಒಟ್ಟು 38 ಸುರಂಗಗಳನ್ನೂ ಹಾಗು ಸುಮಾರು ಐವತ್ತು ಬ್ರಿಡ್ಜ್ ಗಳನ್ನೂ ದಾಟಿದ್ದೆವು. ಆದರೂ ಈ ಬ್ರಿಡ್ಜ್ ಮೇಲೆ ಬರಲು ಸಾಧ್ಯವಾಗದಿದ್ದಕ್ಕೆ ಸ್ವಲ್ಪ ಬೇಸರವಾಯಿತು. ನಾವು ಕಾಡಿನ ಕಾಲುದಾರಿ ಹಿಡಿದು ನಡೆದೆವು. ಹೋಗುವಾಗ ಶೂ ನಲ್ಲಿ  ಜಿಗಣೆ ಸೇರಿಕೊಂಡು ಹಾಯಾಗಿ ರಕ್ತ ಹೀರುತ್ತಿತ್ತು.   ನನಗೆ ಆಗ ಗೊತ್ತೇ ಆಗಲಿಲ್ಲ ಐದು ಕಿ.ಮೀ. ನಡೆದು ಡಾಂಬರು ರಸ್ತೆಯನ್ನು ಸೇರಿದೆವು. ಆಗಂತೂ ಎಲ್ಲರಿಗೂ ಬಹಳ ಸಂತೋಷವಾಗಿತ್ತು. ನನ್ನ ಶೂ ನಲ್ಲಿದ್ದ ಜಿಗಣೆ 'ಟೈಟ್' ಆಗಿತ್ತು. ಅದನ್ನು ಬಿಡಿಸುವುದರಲ್ಲಿ ಅದು ಸತ್ತೇ ಹೋಯಿತು.  ನಮಗೆ ಅಲ್ಲಿ ಒಂದು ಟ್ರ್ಯಾಕ್ಸ್ ಸಿಕ್ಕು ಅದರಲ್ಲೇ ಸುಬ್ರಹ್ಮಣ್ಯಕ್ಕೆ ಹೊರಟೆವು. ನಮ್ಮ ಅನುಭವ ನಿಜಕ್ಕೂ ಭಯಂಕರವಾಗಿತ್ತು. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ನಾವು ಸುಬ್ರಹ್ಮಣ್ಯಕ್ಕೆ ಬರಲು ಆಗುತ್ತಿರಲಿಲ್ಲ. ಸುಬ್ರಹ್ಮಣ್ಯಕ್ಕೆ ಬಂದ ತಕ್ಷಣ ನಾನು ಮನೆಗೆ ಫೋನಾಯಿಸಿದೆ ಮತ್ತು ಹೊಸ ಬ್ಯಾಗ್ ತಗೊಂಡೆ. ಎಲ್ಲರೂ ವಿರಮಿಸಿಕೊಲ್ಲುತ್ತಿರುವಾಗ ನಾನು ಮತ್ತು ಹರೀಶ್ 'ಆಶ್ಲೇಷ'ದಲ್ಲಿ ರೂಂ ಬುಕ್ ಮಾಡಿಬಂದೆವು. ಲಗೇಜ್ ಸಮೇತ ರೂಂ ನಂ. 417 ಗೆ ನಾನು ರಶ್ಮಿ ವಿಭಾ ಚಂದ್ರಿಕಾ ಬಂದೆವು. ಸ್ನಾನ ಮಾಡಿಕೊಂಡು ಸುಬ್ರಹ್ಮಣ್ಯನ ದರ್ಶನಕ್ಕೆ ಹೋಗುವುದೆಂದು ಅಂದುಕೊಂಡು ಸ್ನಾನ ಮಾಡಿ ತಯಾರಾದೆ. ಸೋಪ್ ಹಾಗು ಪೌಡರ್ ನ ಪುರಾಣವಂತೂ ಎಂದಿಗೂ ಮರೆಯಲಾಗದ್ದು. 

ಎಲ್ಲರೂ ಸುಬ್ರಹ್ಮಣ್ಯನ ದರ್ಶನ ಪಡೆದು ಪ್ರಸಾದವನ್ನು ಕೂಡ ಭಕ್ಷಿಸಿದೆವು. ಅಶ್ವಿನ್ ಹಾಗು ಮುತ್ತು ಪ್ಲಾನ್ ನಂತೆ ಕೆಲವರು ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಮಧ್ಯದಲ್ಲಿ ಚಂದ್ರಣ್ಣ ಒಂದು ಸಾರಿ ಬೆಂಗಳೂರು ಮತ್ತೊಂದು ಸಾರಿ ಮಂಗಳೂರು ಎಂದು ಹೇಳಿ ಹರೀಶನಿಗೆ ಸ್ವಲ್ಪ ಆಟ ಆಡಿಸಿದ. ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿಸುವ ಜವಾಬ್ದಾರಿ ಹರೀಶನೆ ವಹಿಸಿಕೊಂಡಿದ್ದ. ಚಂದ್ರಣ್ಣನ ನಿರ್ಧಾರ ಗಟ್ಟಿಯಾಗುವವರೆಗೂ ಹರೀಶನಿಗೆ ಟಿಕೆಟ್ ಬುಕ್ ಮಾಡಿಸಲು ಆಗಲಿಲ್ಲ. ಚಂದ್ರಣ್ಣ ಹೀಗೇ ಬೆಂಗಳೂರಿನಿಂದ ಮಂಗಳೂರಿಗೆ ಬದಲಾಯಿಸಿದ ಉದ್ದೇಶ ಏನೆಂದು ತಿಳಿಯಲಿಲ್ಲ. ಕೊನೆಗೆ ನಾನು ಹರೀಶ್ ವಿಭಾ ಬೆಂಗಳೂರಿಗೆ ಹೊರಡುವುದೆಂದೂ ಅವರೆಲ್ಲ ಮಂಗಳೂರಿಗೆ ಹೋಗುವುದೆಂದೂ ಮಾತಾಡಿಕೊಂಡೆವು.  ಟೆಂಟ್ ನಲ್ಲಿ ಒಂದು ದಿನವಾದರೂ ಇರಬೇಕೆಂದುಕೊಂಡಿದ್ದ ನಮ್ಮ ಆಸೆ, ಆಸೆಯಾಗಿಯೇ ಉಳಿಯಿತು. ಗ್ಯಾಸ್  ಸಿಲಿಂಡರ್ ಅನ್ನು  ಬೆಂಗಳೂರಿಗೆ ತೆಗೆದುಕೊಂಡು ಹೋಗಲು ನಾವು ನಿರಾಕರಿಸಿದ್ದಕ್ಕೆ ಅಶ್ವಿನ್ ಮುಖ ಊದಿಸಿಕೊಂಡಿದ್ದ. ರಾತ್ರಿ ಸುವರ್ಣ ಕರ್ನಾಟಕದ ಸಾರಿಗೆ ವಾಹನದಲ್ಲಿ ಬೆಂಗಳೂರಿನ ಕಡೆಗೆ ಮುಖಮಾಡಿದೆವು. ಅವರೆಲ್ಲ ಮಂಗಳೂರಿಗೆ ಬೀಚ್ ನೋಡಲು ಹೊರಟರು. ಇಲ್ಲಿಗೆ ನಮ್ಮ ಯಡಕುಮರಿಯ ಚಾರಣ ಸುಖಾಂತ್ಯ ಪಡೆದುಕೊಂಡಿತು. ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದ ಛಾಯಾಚಿತ್ರಗಳನ್ನು ನೋಡುತ್ತಿರುವಾಗ ಮನಸು ಹಿಂಗಾಲಿನಲ್ಲಿ ಯಡಕುಮರಿಯ ಕಡೆಗೆ ಓಡಿತ್ತು.

ಮಂಗಳವಾರ, ಮಾರ್ಚ್ 09, 2010

ಬ್ಲಾಗೋದಯ

ನನ್ನ ಬ್ಲಾಗಿನಲ್ಲಿ ಪ್ರಪ್ರಥಮವಾಗಿ ಪ್ರಕಟಿಸಲು ಅತ್ಯಂತ ಸೂಕ್ತವಾದ ಲೇಖನವೆಂದರೆ ಪ್ರಾಯಶಃ ಇದೇ ಇರಬಹುದೇನೋ.. ನಾನು ಬ್ಲಾಗು ಶುರು ಮಾಡಲು ಕಾರಣ ಮತ್ತು ಸ್ಫೂರ್ತಿ ನನ್ನ 'ಬೇಸರ' ಎಂದರೆ ಖಂಡಿತ ತಪ್ಪಾಗಲಾರದು. ನನ್ನ ಬೇಸರಿಕೆಯನ್ನು ಕಳೆಯಲು ಇದು ತುಂಬಾ ಸಹಕಾರಿಯಾಯಿತಲ್ಲದೆ, ನನ್ನ ಹವ್ಯಾಸವನ್ನು ನನಗೆ ಮರಳಿಸಿದೆ. ಅದಕ್ಕೋಸ್ಕರ ಈ ಬ್ಲಾಗಿಗೆ ಆರಂಭದಲ್ಲೇ ಧನ್ಯವಾದವನ್ನು ತಿಳಿಸುತ್ತೇನೆ. ಬ್ಲಾಗೋದಯ ನನ್ನ ಬ್ಲಾಗಿನ ಜನ್ಮ ಕಥೆ. ನನ್ನ ಬ್ಲಾಗ್ ಹುಟ್ಟಿದ ಕಥೆಯನ್ನು ನಿಮಗೆ ಹೇಳುತ್ತೇನೆ ಕೇಳುವಂಥವರಾಗಿ...

ಕಾಲೇಜಿನ ದಿನಗಳಲ್ಲಿ ಸದಾ ಓದುವುದು, ಓದುವುದಕ್ಕಿಂತಲೂ ಓದುತ್ತಿರುವ ಹಾಗೆ ನಟಿಸುವುದು.. ಹರಟೆ ಟೀಕೆಗಳಲ್ಲೇ ವ್ಯರ್ಥ ಕಾಲ ಹರಣ ಮಾಡುವುದು ಇದೇ ನನ್ನ ದಿನಚರಿಯ ಬಹುಮುಖ್ಯ ಭಾಗವಾಗಿತ್ತು. ಆಮೇಲೆ ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಸೇರಿದ ಮೇಲೆ ಕೇಳಬೇಕೆ? ನನ್ನ ಅಮೂಲ್ಯ ಸಮಯವೆಲ್ಲ ಅತ್ತ ಕೆಲಸದಲ್ಲೂ ಅಲ್ಲದೆ ಇತ್ತ ಮನೆಯಲ್ಲೂ ಅಲ್ಲದೆ ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲೆ ಕಳೆದು ಹೋಗುತ್ತಿತ್ತು. ಈಗ ಮದುವೆಯಾಗಿ ಅಮೆರಿಕೆಗೆ ಬಂದ ಮೇಲೆ ದಿನವೆಲ್ಲ ಖಾಲಿ ಖಾಲಿ. ಸಮಯವೆಂಬೋ ಸಮಯವೆಲ್ಲ ನನ್ನ ಹತ್ತಿರವೇ ಇದೆಯೇನೋ ಅನ್ನಿಸುತ್ತಿತ್ತು. ನಾನು ನನ್ನ ಜೀವಮಾನದಲ್ಲೇ ಇಷ್ಟೊಂದು ಫ್ರೀಯಾಗಿ ಇದ್ದಿರಲಿಲ್ಲ. ಸಮಯ ಕಳೆಯಲು ಎಲ್ಲ ಸ್ನೇಹಿತರಿಗೆ ಫೋನಾಯಿಸುವುದು, ಅಂತರ್ಜಾಲದಲ್ಲಿ ತಡಕಾಡುವುದು ಹೀಗೆ ಕೆಲಸಕ್ಕೆ ಬಾರದ ಕೆಲಸಗಳನ್ನು ಮಾಡುತ್ತಿದ್ದೆ. ಬರೀ ಇದನ್ನೇ ಎಷ್ಟು ದಿವಸ ಮಾಡುವುದು? ಟಿವಿಯಾಗಲಿ ಐಪಾಡ್ ಆಗಲಿ ನನ್ನ ಬೇಸರಕ್ಕೆ ಸರಿಯಾದ ಸಂಗಾತಿಯಾಗಲಿಲ್ಲ. ಬದಲಿಗೆ ಟಿವಿಯಲ್ಲಿ ಬರುವ ಸೀರಿಯಲ್ಲುಗಳು ಶತ್ರುಗಳಾಗಿ ಬದಲಾದವು. ಒಂದು ಸಲ ನನ್ನ ಸ್ನೇಹಿತನಾದ ಹರೀಶ್ ನನ್ನ ಬೇಸರಕ್ಕೆ ಒಳ್ಳೆಯ ಉಪಶಮನವನ್ನು ಕೊಟ್ಟ ಏನೆಂದರೆ.. ಒಂದು ಬ್ಲಾಗ್ ಶುರು ಮಾಡುವುದು. ಕಾಲೇಜಿನ ದಿನಗಳಲ್ಲಿ ಹೀಗೆ ಸುಮ್ಮನೆ ಕಥೆ ಕವನ ಅದೂ ಇದೂ ಅಂತ ತುಂಬಾ ಬರೆಯುತ್ತಿದ್ದೆ. ಅದೇ ಹವ್ಯಾಸವನ್ನು ಮುಂದುವರೆಸು ಅದನ್ನೇ ಬ್ಲಾಗಿನಲ್ಲಿ ಪೋಸ್ಟ್ ಮಾಡು ಎಂದು ಹೇಳಿದ. ಸಲಹೆ ಏನೋ ಚೆನ್ನಾಗಿತ್ತು. ನನಗೂ ಕೂಡ ನನ್ನ ಅಭಿರುಚಿಯನ್ನು ಅಭಿವ್ಯಕ್ತಿಗೊಳಿಸಲು ಇದೇ ಸರಿಯಾದ ದಾರಿಎನಿಸಿ ಬ್ಲಾಗ್ ರಚಿಸಲು ಮುಂದಾದೆ. ಗಣಕಯಂತ್ರದ ಜ್ಞಾನ ತುಸು ಕಡಿಮೆ ಇದ್ದುದರಿಂದ ಬ್ಲಾಗ್ ಗೆ ಒಂದು ರೂಪ ಕೊಡುವುದರಲ್ಲಿ ಒಂದು ವಾರವೇ ಬೇಕಾಯಿತು. ಆದರೆ ಅದಕ್ಕೆ ಸರಿಹೊಂದುವಂತಹ ಶೀರ್ಷಿಕೆ ಕೊಡಲು ಒಂದು ತಿಂಗಳೇ ಬೇಕಾಯಿತು. ನನ್ನದೇ ಆದ ಈ ಬ್ಲಾಗಿಗೆ ಒಂದು ಮುದ್ದಾದ ಹೆಸರು ಕೊಡಬೇಕೆನಿಸಿ ಅಂತರ್ಜಾಲದ ಬ್ರಹ್ಮನೆನಿಸಿರುವ ಗೂಗಲ್ ನ ಮೊರೆಹೋದೆ. ಒಂದಷ್ಟು ಒಳ್ಳೆಯ ಶೀರ್ಷಿಕೆ ಸಿಕ್ಕವಾದರೂ ಮನಸಿಗೆ ಸಮಾಧಾನ ತರುವಂತಹ ನನ್ನ ಬ್ಲಾಗಿಗೆ ಇದೇ ತಕ್ಕ ಶೀರ್ಷಿಕೆ ಎನ್ನುವಂತಹ ಹೆಸರು ಅವ್ಯಾವವೂ ಆಗಿರಲಿಲ್ಲ. ಬ್ಲಾಗಿಗೆ ಹೆಸರಿಡಲು ನನ್ನ ಕನ್ನಡದ ಜ್ಞಾನವನನೆಲ್ಲ ಒರೆಗೆ ಹಚ್ಚಿದೆ. ಈ ನಾಮಕರಣವೆನ್ನುವುದು ಎಷ್ಟು ಕಷ್ಟದ ಕೆಲಸ ಎನ್ನುವ ಅರಿವು ನನಗೆ ಆಗಲೇ ಆಗಿದ್ದು. ಒಂದು ಹೆಸರನ್ನು ಆರಿಸಿಕೊಂಡರೆ ಇನ್ನೊಂದು ಚೆಂದವೆನಿಸುತ್ತಿತ್ತು. ಒಂದು ಹೆಸರನ್ನು ಆಯ್ಕೆ ಮಾಡಿಕೊಂಡು ಅದನ್ನು ಇಡೋಣವೆನ್ನುವಾಗ ಇನ್ನೊಂದು ಅದಕ್ಕಿಂತಲೂ ಸುಂದರವಾದ ಹೆಸರು ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಛೇ ಇದೇನಿದು ಬರೀ ಒಂದು ಶೀರ್ಷಿಕೆ ಕೊಡುವುದರಲ್ಲೇ ನಾನು ಸೋತು ಹೋದೆನೆ? ಇನ್ನು ಲೇಖನ ಬರೆದು ಪ್ರಕಟಿಸಲು ಸಾಧ್ಯವೇ? ಇದೆಲ್ಲ ಆಗದ ಮಾತು ಎಂದೆನಿಸಿ ನನ್ನ ಬ್ಲಾಗ್ ರಚನೆಯ ಕೆಲಸಕ್ಕೆ ಪ್ರಾರಂಭದಲ್ಲೇ ಅಂತ್ಯ ಹಾಡಿದೆ. ಸ್ವಲ್ಪ ದಿವಸಗಳ ನಂತರ ಹರೀಶ್ ಮತ್ತೆ ಈ ಬ್ಲಾಗ್ ರಚಿಸುವ ಬಗ್ಗೆ ಪ್ರಸ್ತಾಪ ಮಾಡಿದ. ಅವನ ಮಾತನ್ನು ಹಾಗೆ ತಳ್ಳಿಹಾಕಿದೆನಾದರೂ ಯಾವುದೋ ಮೂಲೆಯಲ್ಲಿ ರಚಿಸಿದ್ದ ಬ್ಲಾಗಿಗೆ ಹೆಸರುಕೊಟ್ಟು ಲೇಖನಗಳನ್ನು ಪ್ರಕಟಿಸುವ ಆಸೆ ಉಳಿದಿತ್ತು. ಒಂದು ದಿನ ಅಡುಗೆ ಕೆಲಸ ಮಾಡುತ್ತಿರುವಾಗ ನನ್ನ ಕಾಲೇಜಿನ ದಿನಗಳನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದೆ. 'ನೆನಪು' ಎನ್ನುವುದರಬಗ್ಗೆ ಆಶುಭಾಷಣ ಸ್ಪರ್ಧೆಯಲ್ಲಿ ಮಾತಾಡಿ ಬಹುಮಾನವನ್ನೂ ಗಿಟ್ಟಿಸಿದ್ದೆ. ಸರಿ ಎನೋ ನೆನಪಾಯಿತು ನನ್ನ ಬ್ಲಾಗಿಗೆ ಶೀರ್ಷಿಕೆ ಹುಡುಕುತ್ತಿದ್ದೆನಲ್ಲವೆ? ನೆನಪು ಅಂತಲೇ ಹೆಸರಿಡೋಣ ಅಂದುಕೊಂಡು ಲ್ಯಾಪ್ಟಾಪ್ ತೆಗೆದೆ. ಮನಸು ಮತ್ತೆ ಕಾಲೇಜಿನ ದಿನಗಳತ್ತ ಓಡಿತು. ನಾವು ಮಾಡುತ್ತಿದ್ದ ತರಲೆಗಳು, ಪರೀಕ್ಷೆ ಬಂತೆಂದರೆ ಅಚ್ಚುಕಟ್ಟಾಗಿ ಒಟ್ಟಿಗೇ ಓದುವುದು, ಪರೀಕ್ಷೆ ಮುಗಿದಮೇಲೆ ಮನೆಯಲ್ಲಿ ಏನಾದರೊಂದು ನೆಪ ಹೇಳಿ ಪ್ರವಾಸಕ್ಕೆ ಹೊರಡುವುದು ಹೀಗೆ... ಲ್ಯಾಪ್ಟಾಪ್ ಆನ್ ಮಡಿದ ತಕ್ಷಣ ನಾನು ಮಾಡುವ ಮೊದಲ ಕೆಲಸವೆಂದರೆ ನನ್ನ ಜಿಮೈಲ್ ಓಪನ್ ಮಾಡಿ ನನ್ನ ಮೇಲ್ ಬಾಕ್ಸ್ ಚೆಕ್ ಮಾಡುವುದು. ಆದ್ದರಿಂದ ಈ ಬಾರಿಯೂ ಆ ಸಂಪ್ರದಾಯವನ್ನು ಮುರಿಯದೇ ನನ್ನ ಇನ್ ಬಾಕ್ಸ್ ನಲ್ಲಿ ಕಣ್ಣು ಹಾಯಿಸಿದೆ. ನನ್ನ ಬಾಲ್ಯ ಗೆಳತಿಯೊಬ್ಬಳಿಂದ ಸಂದೇಶ ಬಂದಿತ್ತು. ಮತ್ತೆ ನನ್ನ ಮನಸು ಶರವೇಗದಿಂದ ಬಾಲ್ಯದತ್ತ ಸಾಗಿತು. ಪ್ರಾಥಮಿಕ ಶಾಲೆಯಲ್ಲಿ ನಮಗೆ ಒಂದರಿಂದ ನಾಲ್ಕನೇ ಕ್ಲಾಸಿನವರೆಗೆ ಬಹಳ ಆಸ್ಥೆಯಿಂದ ಕಲಿಸಿದ ಶಕುಂತಲ ಮಿಸ್, ದಿನವೂ ಶುದ್ಧ ಬರಹ (ಕಾಪಿ ರೈಟಿಂಗ್) ಬರೆಯದೆ ಇದ್ದಾಗ ಸಿಗುತ್ತಿದ್ದ ಕಠಿಣ ಶಿಕ್ಷೆ, ಗಾಂಧಿಜಯಂತಿಯ ಶ್ರಮದಾನ ಎಲ್ಲವೂ ನೆನಪಾಯಿತು. ತದನಂತರ ನಾನು ಆರನೇ ತರಗತಿಯಲ್ಲಿ ವಸತಿಶಾಲೆಯಾದ ನವೊದಯಕ್ಕೆ ಆಯ್ಕೆಯಾಗಿ, ನನ್ನ ಇಷ್ಟದ ಶಾಲೆ ಊರು ತಂದೆತಾಯಿ ಎಲ್ಲರನ್ನೂ ಬಿಟ್ಟು ನವೋದಯದಲ್ಲಿ ಐದು ವರ್ಷ ಓದಿದೆ. ಅಲ್ಲಿ ಶಿಸ್ತಿಗೆ ಮೊದಲ ಆದ್ಯತೆ. ನಾವೆಲ್ಲಾ ದಿನವೂ ಗ್ರೇ ಅಂಡ್ ವೈಟ್ ಯುನಿಫಾರ್ಮ್ ತೊಟ್ಟು ಶಾಲೆಗೆ ಹೋಗುವುದು, ಐದು ಚರಣದ ನವೋದಯ ಗೀತೆಯನ್ನು ಆಕಳಿಸುತ್ತಾ ಹಾಡುವುದು, ಗಡಿಯಾರ ಸರಿಯಾಗಿ ಒಂದು ಗಂಟೆಬಾರಿಸುತ್ತಿದ್ದಂತೆ ತಕ್ಷಣ ತಟ್ಟೆ ಹಿಡಿದುಕೊಂಡು ನಾಮುಂದು ತಾಮುಂದು ಎಂದು ಮೆಸ್ ಹತ್ತಿರಕ್ಕೆ ಓಡುವುದು ಎಲ್ಲವೂ ನೆನಪಾಗಿ ನನಗರಿವಿಲ್ಲದಂತೆಯೇ ನಗು ಬಂತು. ನಮ್ಮ ಈ ನವೋದಯದ ಬಗ್ಗೆಯೇ ಒಂದು ಲೇಖನ ಬರೆಯಬೇಕು ಎನಿಸಿತು. ನನ್ನ ನವೋದಯ ಶಾಲೆಯ ದಿನಗಳನ್ನ ನಿಮ್ಮೊಂದಿಗೆ ಖಂಡಿತವಾಗಿಯೂ ಮುಂದೆ ಹಂಚಿಕೊಳ್ಳುತ್ತೇನೆ.

ಹೀಗೆ ಸಾಲುಸಾಲಾಗಿ ತೇಲಿ ಬಂದ ನೆನಪುಗಳಲ್ಲಿ ಮೈಮರೆತಿದ್ದ ನನಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ನಾನು ಯಾವ ಕೆಲಸಕ್ಕೆ ಈ ಲ್ಯಾಪ್ಟಾಪ್ ತೆಗೆದೆನೆಂದು ಕ್ಷಣಾರ್ಧದಲ್ಲಿ ಅರಿವಾಯಿತು. ಮನಸು ಸಿಕ್ಕ ಸಿಕ್ಕಲ್ಲಿ ಹರಿಯುತ್ತದೆ ಅದನ್ನು ಹತೋಟಿಗೆ ತೆಗೆದುಕೊಳ್ಳುವುದೇ ಹರಸಾಹಸ ಅಲ್ಲವೇ? ನನ್ನ ಬ್ಲಾಗಿಗೆ ನೆನಪು ಅಂತ ನಾಮಕರಣ ಮಾಡುವುದೆಂದು ತೀರ್ಮಾನಿಸಿ ಗಣಕಯಂತ್ರದ ಕೀಲಿಮಣೆಯ ಮೇಲೆ ಬೆರಳಾಡಿಸುತ್ತಿದ್ದಂತೆಯೇ ನೆನಪು ಎನ್ನುವ ಹೆಸರಿಗಿಂತ ನೆನಪಿನ ಮೆರವಣಿಗೆ ಎಂದು ಇಡೋಣವೆನಿಸಿತು. ಯಾಕೆಂದರೆ ಒಂದೇ ನೆನಪು ಬರಲು ಸಾಧ್ಯವೇ ಇಲ್ಲ. ಬೇಕಾದರೆ ನೀವೇ ಪರೀಕ್ಷೆ ಮಾಡಿಕೊಳ್ಳಿ.. ಬರೀ ಒಂದೇ ವಿಷಯವನ್ನು, ವ್ಯಕ್ತಿಯನ್ನು ಅಥವಾ ಯಾವುದೋ ಒಂದು ವಸ್ತುವನ್ನು ನೆನಪಿಸಿಕೊಂಡಾಗ ಅದರ ಜೊತೆಗೆ ಅದಕ್ಕೆ ಸಂಬಂಧಿಸಿದ ಇನ್ನೂ ಹತ್ತು ಹಲವು ನೆನಪುಗಳು ನಿಮ್ಮನ್ನು ಮುತ್ತಿಕೊಳ್ಳುತ್ತವೆ. ಒಂದನ್ನು ನೆನಪಿಸಿಕೊಂಡಾಗ ಅದರ ಹಿಂದೆ ಮತ್ತೊಂದು ನೆನಪು.. ಹೀಗೆ ನೆನಪುಗಳು ಮನಸಿನಲ್ಲಿ ಮೆರವಣಿಗೆ ಹೊರಟುಬಿಡುತ್ತವೆ. ನೆನಪುಗಳಲ್ಲಿ ಸಿಹಿ ಕಹಿಯ ನೆನಪುಗಳೂ ಇರುತ್ತವೆ. ಹಿಂದಿನ ನೆನಪುಗಳು ಮತ್ತು ಅವುಗಳಿಂದ ಕಲಿತ ಪಾಠ ಮುಂದಿನ ಬದುಕಿಗೆ ಮಾರ್ಗದರ್ಶನ ಮಾಡುತ್ತವೆ. ನೆನಪಿನ ಬಗ್ಗೆ ಬರೆಯುತ್ತ ಹೋದರೆ ಸಾಕಷ್ಟು ಬರೆಯಬಹುದು. ಈಗ ಹೇಳಿ ನನ್ನ ಬ್ಲಾಗಿಗೆ 'ನೆನಪಿನ ಮೆರವಣಿಗೆ' ಯಷ್ಟು ಸೂಕ್ತ ಶೀರ್ಷಿಕೆ ಇನ್ನೊಂದಿಲ್ಲ ಅಲ್ಲವೇ? ಬ್ಲಾಗ್ ರಚಿಸಿ ಅದಕ್ಕೆ ಸರಿಯಾದ ಶೀರ್ಷಿಕೆ ಕೊಟ್ಟು ಮೊದಲನೆಯ ಈ ಲೇಖನವನ್ನು ಪ್ರಕಟಿಸುವ ಹೊತ್ತಿನಲ್ಲಿನನ್ನ ಮನಸು
ನನ್ನ ಬ್ಲಾಗು ನನ್ನದು...
ನನ್ನ ಪೋಸ್ಟು ನನ್ನದು...
ನನ್ನ ನೆನಪು ನನ್ನದು.. ಎಂದೆಂದಿಗೂ..
(ನನ್ನ ಹಾಡು ನನ್ನದು.... ಧಾಟಿಯಲ್ಲಿ)
ಎಂದು ಹಾಡುತ್ತಿದೆ.. ಈ ಬ್ಲಾಗಿನಲ್ಲಿ ನನ್ನ ನೆನಪಿನ ಭಂಡಾರದಲ್ಲಿರುವ ಸವಿನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಓದಿ ಆನಂದಿಸಿ.